ಮಂಗಳೂರು : ಬುಧವಾರ ಬೆಳಗ್ಗೆ 6 .30 ಕ್ಕೆ ಮಂಗಳೂರು ಹಳೆ ಬಂದರು ದಕ್ಕೆಯಿಂದ ಸಿಮೆಂಟ್, ಜಲ್ಲಿ, ಕಬ್ಬಿಣ ಮತ್ತಿತರ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮತ್ತು ಆಹಾರ ವಸ್ತುಗಳನ್ನು ಹೊತ್ತು ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ನೌಕೆ ‘ಅಲ್ ಮಸೂರ್’ ಮಂಗಳೂರಿನಿಂದ 50 ನಾಟಿಕಲ್ ಮೈಲು ದೂರ ತಲುಪಿದಾಗ ಗಾಳಿ ಮತ್ತು ತೆರೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಎಲ್ಲಾ 6 ಮಂದಿ ಸಿಬಂದಿ ಹುಸೈನ್, ಅರಾಫತ್, ಖಾದರ್, ಅನ್ವರ್, ಜಾವೇದ್ ಮತ್ತು ಬಶೀರ್ ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರು ಹಳೆ ಬಂದರು ದಕ್ಕೆಯಿಂದ ಲಕ್ಷದ್ವೀಪಕ್ಕೆ ಹೊರಟ ಸರಕು ನೌಕೆ ‘ಅಲ್ ಮಸೂರ್’ ಅರಬಿ ಸಮುದ್ರದಲ್ಲಿ 50 ನಾಟಿಕಲ್ ಮೈಲು ದೂರ ತಲುಪಿದಾಗ ಸಮುದ್ರ ಪ್ರಕ್ಶುಬ್ಧವಾಗಿದ್ದು ತೀವ್ರ ತೆರನಾದ ಗಾಳಿ ಬೀಸತೊಡಗಿತ್ತು. ಗಾಳಿಯಿಂದಾಗಿ ಮುಂದೆ ಹೋಗಲು ಸಾಧ್ಯವಾಗದೆ ಸಿಬ್ಬಂಧಿಗಳು ಹಡಗನ್ನು ಹಿಂದೆ ತಿರುಗಿಸಿ ವಾಪಾಸು ಮಂಗಳೂರಿಗೆ ತೆರಳುತ್ತಿದ್ದಾಗ ಸ್ವಲ್ಪ ದೂರದಲ್ಲಿಯೆ ನೌಕೆ ನೀರಲ್ಲಿ ಮುಳುಗಲು ಪ್ರಾರಂಭಿಸಿದೆ. ಕೂಡಲೇ ನೌಕೆಯಲ್ಲಿದ್ದ ಸಿಬ್ಬಂದಿ ಲಕ್ಷದ್ವೀಪದ ‘ಕರ್ಪ್ ಮುತ್ತಮ್ಮ ಅನಿಯಮ್ಮ’ ಹಡಗಿನ ಸಿಬಂದಿಗೆ ವೈರ್ಲೆಸ್ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ‘ಕರ್ಪ್ ಮುತ್ತಮ್ಮ ಅನಿಯಮ್ಮ’ ಹಡಗಿನ ಸಿಬಂದಿಗಳು ರಕ್ಷಣೆಗೆ ದಾವಿಸಿ ಸಿಬ್ಬಂಧಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಬಳಿಕ ಆ ಹದಗಿನಲ್ಲೇ ಯಾನ ಬೆಳೆಸಿದ ಸಿಬ್ಬಂಧಿಗಳು ಗುರುವಾರ ಬೆಳಗ್ಗೆ ಮಂಗಳೂರು ತಲುಪಿದರು.
‘ಅಲ್ ಮಸೂರ್’ ಹಡಗು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಸುಮಾರು 30 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English