ಮೇಯರ್, ಕಮಿಷನರ್ ನಡುವೆ ಶೀತಲ ಸಮರ

12:29 PM, Wednesday, February 13th, 2013
Share
1 Star2 Stars3 Stars4 Stars5 Stars
(No Ratings Yet)
Loading...

Mayor vs comissionerಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗುಲ್ಜಾರ್ ಬಾನು ಮತ್ತು ಕಮಿಷನರ್ ಡಾ. ಹರೀಶ್ ಕುಮಾರ್ ಮಧ್ಯೆ ಬಿರುಕು ಮೂಡಿದೆಯೇ? ಹೌದು ಎನ್ನುತ್ತದೆ, ಮೂಲಗಳು.

ತನ್ಮಧ್ಯೆ ತನ್ನನ್ನು ನಿರ್ಲಕ್ಷಿಸಲು, ತನ್ನ ಹುದ್ದೆಗೆ ಅಗೌರವವಾಗಲು ಕಮಿಷನರ್ರೇ ಕಾರಣ ಎಂದು ಗುಲ್ಜಾರ್ ಬಾನು ಹೇಳಿಕೊಳ್ಳುತ್ತಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ.

ಮನಪಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಹೇರುವ ಸಂದರ್ಭ ಕಮಿಷನರ್ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ… ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸಂದರ್ಭ ಜಿಲ್ಲಾಡಳಿತ ಮುದ್ರಿಸಿದ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಕೆಳಗಡೆ ಮುದ್ರಿಸಲು ಕಮಿಷನರ್ರ ಕುಮ್ಮಕ್ಕು ಇದೆ ಎಂದು ಮೇಯರ್ ತನ್ನಾಪ್ತರಲ್ಲಿ ಹೇಳಿಕೊಂಡದ್ದು ಮತ್ತು ಕಮಿಷನರ್ ಗೆ ಪಾಲಿಕೆಯ ಕಚೇರಿ ಬದಲು ಜಿಲ್ಲಾಡಳಿತ ಕಚೇರಿಯಲ್ಲಿ ಏನು ಕೆಲಸ ಎಂದು ಕೇಳಿಕೊಂಡದ್ದು ಕೂಡ ಕಮಿಷನರ್ ರ ಕಿವಿಗೆ ಬಿದ್ದಿದೆ.

ಆದದ್ದಾಗಲಿ…. ಅವಧಿ ಮುಗಿಯುತ್ತಾ ಬಂತು. ತನಗಿನ್ನು ಏನಾಗಲಿಕ್ಕಿದೆ?. ಈಗ ನನ್ನ ನೋವನ್ನು ಹೇಳಿಕೊಳ್ಳದೆ ಇನ್ನು ಯಾವಾಗ? ಎಂದು ಮೇಯರ್ ಬಹಿರಂಗವಾಗಿ ಕೇಳಿಕೊಂಡಿರುವುದು ಕೂಡ  ಕಮಿಷನರ್ ಗೆ ಒಂದಷ್ಟು ಕಿರಿಕಿರಿ ಉಂಟು ಮಾಡಿದೆ.

ಇವೆಲ್ಲದರ ಮಧ್ಯೆ ಪಕ್ಷದ ಮುಖಂಡರು ತನ್ನ ನೆರವಿಗೆ ಬಂದಿಲ್ಲ. ತನಗೆ ಈ ರೀತಿ ಬಹಿರಂಗವಾಗಿ ಅಗೌರವವಾಗುತ್ತಿದ್ದರೂ ಅದನ್ನು ಸಾರ್ವಜನಿಕವಾಗಿ ಪ್ರಶ್ನಿಸದಿರುವುದು ಕೂಡ ಮೇಯರ್ ರ ಬೇಸರಕ್ಕೆ ಕಾರಣವಾಗಿದೆ.

ಜನಪ್ರತಿನಿಧಿಯೊಬ್ಬರಂತೂ ಅಂತಹ ಸಣ್ಣಪುಟ್ಟ ವಿಷಯಕ್ಕೆ ಕೋಪಿಸಿಕೊಂಡರೆ ಹೇಗೆ? ಪುಕ್ಕಟೆ ಸಿಗುವ ಪ್ರಚಾರ ಕೈ ತಪ್ಪುತ್ತದೆಯಲ್ಲಾ ಎಂದು ಮೇಯರ್ ಗೆ ಸಲಹೆ ನೀಡಿದರೆ, ಇನ್ನು ಕೆಲವರು ಪ್ರಚಾರ ಕೈ ತಪ್ಪಿದರೂ ಪ್ರಯೋಜನವಿಲ್ಲ. ಗೌರವ ಬಿಟ್ಟು ಮೆರೆದಾಡುವುದು ಬೇಡ ಎನ್ನುತ್ತಾ ಮೇಯರ್ ಗೆ ಒಂದಷ್ಟು ಆತ್ಮಸ್ಥೈರ್ಯ ತುಂಬುತ್ತಾರೆ.

ಅಂದಹಾಗೆ, ಮಂಗಳೂರಿನ ಪ್ರಪ್ರಥಮ ಮುಸ್ಲಿಂ ಮಹಿಳಾ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗುಲ್ಜಾರ್ ಬಾನುಗೆ ಅಗೌರವವಾಗುತ್ತಿದೆ ಎಂಬ ಮಾತಿಗೆ ಸ್ವತ: ಗುಲ್ಜಾರ್ ಬಾನು “ಎಸ್” ಎನ್ನುತ್ತಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಅದರಲ್ಲೂ ಸ್ವಾತಂತ್ರೋತ್ಸವ, ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ಇತ್ಯಾದಿ ಪ್ರಮುಖ ಸರಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಮೇಯರ್ ರ ಹೆಸರನ್ನು ಮೇಲ್ಗಡೆ ಹಾಕುತ್ತಿದ್ದು ವಾಡಿಕೆ. ಆದರೆ, ಮೇಯರ್ ಗುಲ್ಜಾರ್ ಬಾನು ಅವರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತಿದೆ ಎನ್ನಲಾಗಿದೆ. ಇದಕ್ಕೆಲ್ಲಾ “ರಾಜಕಾರಣ” ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಅರ್ಹವಾಗಿ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿ ಗೆ ಮೇಯರ್ ಆಗುವ ಅವಕಾಶವಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಮೇಯರ್ ಸ್ಥಾನ ಕಾಂಗ್ರೆಸ್ ನ ಪಾಲಾಯಿತು. ಅಂದರೆ, 2012 ಮಾರ್ಚ್ 7ರಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಟಿಪಳ್ಳ 5ನೆ ವಾರ್ಡ್ ನ ಗುಲ್ಜಾರ್ ಬಾನು ಆಯ್ಕೆಯಾದರು. ಅಂದಿನಿಂದ ಬಿಜೆಪಿ ಮತ್ತು ಸಂಘಪರಿವಾರವು ಮೇಯರ್ ರನ್ನು ಬದಿಗೊತ್ತುತ್ತಿದೆ ಎನ್ನಲಾಗಿದೆ. ಇದಕ್ಕೆ ಕೆಲವು ಅಧಿಕಾರಿಗಳು ಕೂಡ ಬೆಂಬಲ ವ್ಯಕ್ತಪಡಿಸುತ್ತಿರುವ ಆರೋಪವಿದೆ.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಡೆಯುವ ಬಹುತೇಕ ಸರಕಾರಿ ಕಾರ್ಯಕ್ರಮದಲ್ಲಿ ಮೇಯರ್ ಗುಲ್ಜಾರ್ ಬಾನು ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಈ ಬಗ್ಗೆ ಗುಲ್ಜಾರ್ ಬಾನು ಅವರನ್ನು ಪ್ರಶ್ನಿಸಿದಾಗ `ಹೌದು… ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಆರಂಭದಲ್ಲೇ ನನಗೆ ಇದರ ಅನುಭವ ಆಗಿದೆ. ನಾನು ಮೇಯರ್ ಆದ ಬಳಿಕ ನಡೆದ ಪ್ರಮುಖ ಸರಕಾರಿ ಕಾರ್ಯಕ್ರಮ, ಉತ್ಸವಕ್ಕೆ ಸಂಬಂಧಿಸಿ ಮುದ್ರಿಸಲ್ಪಟ್ಟ ಆಮಂತ್ರಣ ಪತ್ರಿಕೆಯಲ್ಲಿ `ಮೇಯರ್’ ಹೆಸರನ್ನು ಕೊನೆಗೆ ಹಾಕಲಾಗುತ್ತದೆ.ಇದನ್ನು ಆಯುಕ್ತರ ಗಮನಕ್ಕೂ ತರಲಾಗಿದೆ. ಆದರೆ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ.

`ಇಲ್ಲಿ ನನ್ನ ಹೆಸರು ಅಥವಾ ನಾನು ಮುಖ್ಯ ಅಲ್ಲ. ನನ್ನ ಹುದ್ದೆಗೆ ತಕ್ಕ ಗೌರವ ನೀಡುವುದು ಮುಖ್ಯ. ವ್ಯಕ್ತಿಯಾಗಿ ನಾನು ಗುಲ್ಜಾರ್ ಬಾನು ಆಗಿರಬಹುದು. ಆದರೆ ಮಂಗಳೂರಿನ ಪ್ರಥಮ ಪ್ರಜೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು. ನನ್ನನ್ನು ನಿರ್ಲಕ್ಷಿಸುತ್ತಿರುವುದರ ಹಿಂದೆ ರಾಜಕಾರಣ ಅಡಗಿದೆ. ಮೇಯರ್ ನಿಧಿ ಬಳಕೆಗೂ ಅನುಮೋದನೆ ಸಿಗುತ್ತಿಲ್ಲ. ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆಯಲು ಅಧಿಕಾರಿಗಳಿಗೆ ಸೂಚಿಸಿದರೂ ಅದಕ್ಕೆ ಸ್ಪಂದನೆ ಸಿಗುತ್ತಿಲ್ಲ’ ಎಂದು ಗುಲ್ಜಾರ್ ಬಾನು ಬೇಸರ ವ್ಯಕ್ತಪಡಿಸುತ್ತಾರೆ.

`ನಾನು ಮೇಯರ್ ಆದ ಬಳಿಕ ಮೂರು ಪ್ರಮುಖ ಸರಕಾರಿ ಕಾರ್ಯಕ್ರಮ ನಡೆಯಿತು. ಅದಕ್ಕೆ ಸಂಬಂಧಿಸಿದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಕೊನೆಗೆ ಹಾಕಲಾಗಿದೆ. ಹಾಗಾಗಿ ನಾನು ಸತತ ಗೈರು ಹಾಜರಾಗಿದ್ದೇನೆ. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ನನ್ನನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೇನೆ’ ಎಂದು ಗುಲ್ಜಾರ್ ಬಾನು ಹೇಳುತ್ತಾರೆ.

ಫೋನ್ ಮಾಡಿದಾಗಲೆಲ್ಲಾ “ಜಿಲ್ಲಾಧಿಕಾರಿ ಕಚೇರಿಯ ಮೀಟಿಂಗ್ ನಲ್ಲಿರುವೆ” ಎಂದು ಕಮಿಷನರ್ ಹೇಳಿಕೊಳ್ಳುವುದು, ಎಡಿಬಿ ಬಗ್ಗೆ ಚರ್ಚಿಸಲಿಕ್ಕಿದೆ. ಸಭೆ ಕರೆಯಿರಿ ಎಂದರೆ “ಈಗ ಬೇಡ… ಮುಂದೆ ನೋಡೋಣ” ಎನ್ನುವುದು ಮೇಯರ್ ಮತ್ತು ಕಮಿಷನರ್ ಮಧ್ಯೆ ಬಿರುಕು ಮೂಡಿರುವುದಕ್ಕೆ ಸಾಕ್ಷಿ ಎನ್ನುತ್ತದೆ, ಪಾಲಿಕೆಯ ನಿರ್ಜೀವ  ವಸ್ತುಗಳು.

* ಮೇಯರ್ ಹುದ್ದೆ ಅಗೌರವ ಸಲ್ಲದು : ಮೇಯರ್ ಹುದ್ದೆಗೆ ಅಗೌರವ ಸಲ್ಲದು. ನಾನು ಮೇಯರ್ ಆಗಿದ್ದಾಗ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಮೇಲ್ಗಡೆ ಹಾಕಲಾಗುತ್ತಿತ್ತು. ಅಲ್ಲದೆ, ನಗರಕ್ಕೆ ಗಣ್ಯ ವ್ಯಕ್ತಿಗಳು ಆಗಮಿಸಿದಾಗ ಅವರನ್ನು ಸ್ವಾಗತಿಸುವ ಜವಾಬ್ದಾರಿಯನ್ನು ಅಂದಿನ ಜಿಲ್ಲಾಧಿಕಾರಿ ಅನಿಲ್ ಕುಮಾರ್ ನನಗೆ ನೀಡುತ್ತಿದ್ದರು ಎಂದು ಮಾಜಿ ಮೇಯರ್ ಅಬ್ದುಲ್ ಅಝೀಝ್ ನೆನಪಿಸುತ್ತಾರೆ.

* ನಾನು ಮೇಯರ್ ಆಗಿದ್ದಾಗ ಇಂತಹ ಕೆಟ್ಟ ಪರಿಪಾಠವಿರಲಿಲ್ಲ. ನನ್ನ ಹೆಸರನ್ನು ಕೂಡ ಆಮಂತ್ರಣ ಪತ್ರಿಕೆಯಲ್ಲಿ ಮೇಲ್ಗಡೆ ಹಾಕುತ್ತಿದ್ದರು. ಇದೀಗ ಈ ಬಿಜೆಪಿಗರು ಅದನ್ನೆಲ್ಲಾ  ಬುಡಮೇಲು ಮಾಡುತ್ತಿದ್ದಾರೆ ಎಂದು ಮಾಜಿ ಮೇಯರ್ ಕೆ. ಅಶ್ರಫ್ ಅಭಿಪ್ರಾಯಪಡುತ್ತಾರೆ.

* ಸರಕಾರದ ನಿರ್ದೇಶನ : ಮಂಗಳೂರಿನ ಮೇಯರ್ ಗುಲ್ಜಾರ್ ಬಾನು ಅವರಿಗೆ ತನ್ನ ಹೆಸರನ್ನು ಆಮಂತ್ರಣ ಪತ್ರಿಕೆಯ ಕೆಳಗಡೆ ಹಾಕುವ ಬಗ್ಗೆ ಅಸಮಾಧಾನವಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ.ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹೊರತು ಇತರ ಮೇಯರ್ ಗಳಿಗೆ ಈ ಶಿಷ್ಟಾಚಾರ ಅನ್ವಯವಾಗುವುದಿಲ್ಲ ಎಂಬುದನ್ನೂ ನಮ್ಮ ಮೇಯರ್ ಗೆ ತಿಳಿಸಲಾಗಿದೆ. ಈ ಹಿಂದೆ ಸರಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುತ್ತಿದ್ದಾರೆ. ರಾಜ್ಯದ ಇತರ ಮೇಯರ್ ಗಳು ಈ ಬಗ್ಗೆ ಸರಕಾರವನ್ನು ಒತ್ತಾಯಿಸಿದರೆ ಪ್ರಯೋಜನವಾಗಬಹುದು. ಸರಕಾರದ ಸೂಕ್ತ ನಿರ್ದೇಶನ ಬರುವವರೆಗೆ ನಾವು ಶಿಷ್ಟಾಚಾರ ಪಾಲಿಸಬೇಕಾಗಿದೆ ಎಂದು ಪಾಲಿಕೆಯು ಆಯುಕ್ತ ಡಾ. ಹರೀಶ್ ಕುಮಾರ್ ಹೇಳಿದರು.

* ಶಿಷ್ಟಾಚಾರ ಮುರಿದಿಲ್ಲ : ಆಮಂತ್ರಣ ಪತ್ರಿಕೆಯಲ್ಲಿ `ಮೇಯರ್’ ಹೆಸರು ನಮೂದಿಸುವ ವಿಷಯದಲ್ಲಿ ಜಿಲ್ಲಾಡಳಿತ ಶಿಷ್ಟಾಚಾರ ಮುರಿದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಂದಲೂ ವಿವರ ಪಡೆಯಲಾಗಿದೆ. ಬೆಂಗಳೂರು ಮೇಯರ್ ಬಿಟ್ಟರೆ ರಾಜ್ಯದ ಯಾವ ನಗರ ಪಾಲಿಕೆಯ ಮೇಯರ್ಗೂ ಶಿಷ್ಟಾಚಾರ ಪಾಲನೆಯಿಲ್ಲ. ನನಗೆ ತಿಳಿದ ಮಟ್ಟಿಗೆ 10 ವರ್ಷದಿಂದೀಚೆಗೆ ಮಂಗಳೂರಿನ ಮೇಯರ್ ಹೆಸರನ್ನು ಆಮಂತ್ರಣ ಪತ್ರಿಕೆಯ ಕೆಳಗಡೆ ಮುದ್ರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಚಾರ ವಿಭಗದ ಅಧೀಕ್ಷಕ ನಾರಾಯಣ ಶೆಟ್ಟಿ ಹೇಳುತ್ತಾರೆ.

ರಾಜ್ಯ ಕಾಂಗ್ರೆಸಿಗರ ಚಳಿ ಬಿಟ್ಟಿತು….!

ಅತ್ತ ರಾಹುಲ್ ಗಾಂಧಿ ಎಐಸಿಸಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವಾಗಲೆ ಇತ್ತ ಕರ್ನಾಟಕ ರಾಜ್ಯ ಕಾಂಗ್ರೆಸಿಗರ ಚಳಿ ಬಿಟ್ಟಿದೆ. ಪಕ್ಷದಲ್ಲಿ ಯುವಕರಿಗೆ ಆದ್ಯತೆ ಎಂಬ ಮಂತ್ರದೊಂದಿಗೆ ಚುನಾವಣೆ ಸಂದರ್ಭ ಟಿಕೆಟ್ ಬೇಕಿದ್ದರೆ ಕೆಲವೊಂದು ಷರತ್ತು ಪಾಲಿಸಬೇಕಾಗುತ್ತದೆ ಎಂದು ಫರ್ಮಾನು ಹೊರಡಿಸಿರುವುದು ಕಾಂಗ್ರೆಸ್ಸಿನ ಹಿರಿಯರ ಪಾಲಿಗೆ ನುಂಗಲಾರದ ತುತ್ತಾಗಿದೆ.

ಮಾಜಿ ಮುಖ್ಯಮಂತ್ರಿ ಹಾಗು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಸರಕಾರವನ್ನು ಉರುಳಿಸಲು ದಾಳ ಸಿದ್ಧಪಡಿಸುವಾಗ ಚಳಿ… ಚಳಿ… ಎಂದು ಕೂತರೆ ಮತ್ತೆಂದೂ ರಾಜ್ಯದ ಜನತೆ ತಮ್ಮನ್ನು ಹತ್ತಿರ ಮಾಡಿಕೊಳ್ಳದು ಎಂದು ತೀರ್ಮಾನಿಸಿದ ರಾಜ್ಯ ನಾಯಕರು ತಮ್ಮ ಚಳಿ ಬಿಟ್ಟು “ಪಾದಯಾತ್ರೆ” ಹೊರಟಿದ್ದಾರೆ.

ಸೋಲುವಾಗ ಅಥವಾ ಗೆಲ್ಲಲು ಇನ್ನೇನು ಮೂರು ಗೇಣು ಇರುವಾಗ ಈ ರಾಜಕಾರಣಿಗಳಿಗೆ ನೆನಪಿಗೆ ಬರುವುದು “ಯಾತ್ರೆ”ಗಳು. ಇದೆಲ್ಲಾ ನಿಮ್ಮ ರಾಜಕೀಯ ಗಿಮಿಕ್ ಅಲ್ವಾ? ಎಂದು ಪ್ರಶ್ನಿಸಿದರೆ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಡುವಾಗ ಗಾಂಧೀಜಿ ಕೂಡ “ಯಾತ್ರೆ” ಕೈಗೊಂಡದ್ದು ಮರೆತಿರುವಿರಾ? ಎಂದು ತಿರುಗಿ ಕೇಳುತ್ತಾರೆ.

ವರ್ಷದ ಹಿಂದೆ ಕಾಂಗ್ರೆಸಿಗರು ಪಾದಯಾತ್ರೆಯ ಹಿಂದೆ ಬಿದ್ದಿದ್ದರು. ಗಣಿ ಹಗರಣದ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡು ಸುದ್ದಿ ಮಾಡಿದ್ದರು. ಆವಾಗ ಕೆಲವು ರಾಜಕಾರಣಿಗಳ ಬೊಜ್ಜು ಕರಗಿದ್ದು ಸುಳ್ಳಲ್ಲ. ಅವರಿಗೆ ದಕ್ಕಿದ ಲಾಭ ಕೂಡ ಅದೊಂದೆ.

ಅಂದಹಾಗೆ, ಮಂಗಳವಾರ ಉಳ್ಳಾಲದಿಂದ ಕಾಂಗ್ರೆಸಿಗರು ಆರಂಭಿಸಿದ ಪಾದಯಾತ್ರೆ ಶುಕ್ರವಾರ  ಉಡುಪಿಯಲ್ಲಿ ಸಮಾಪ್ತಿಗೊಂಡಿದೆ. ಉಳ್ಳಾಲದಲ್ಲಿ ಅಭೂತಪೂರ್ವ ಬೆಂಬಲ ಸಿಗಬಹುದು ಎಂದು ನಾಯಕರು ಅಂದುಕೊಂಡಿದ್ದರೂ ಸೇರಿದ ಜನಸಂಖ್ಯೆಯನ್ನು ನೋಡುವಾಗ ಅದೆಲ್ಲಾ ಹುಸಿಯಾಗಿದೆ.

ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಈ ಯಾತ್ರೆಯಲ್ಲಿ ಕಾಲೂರಿದ್ದರೂ ಕೂಡ ಒಳಗೊಳಗೆ ಭಿನ್ನಮತವನ್ನು ಅಲ್ಲಲ್ಲಿ ಬಿಟ್ಟು ಹೋಗಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಹೊರಟ ರ್ಯಾಲಿ ತೊಕ್ಕೊಟ್ಟಿನಲ್ಲಿ ಬಹಿರಂಗ ಸಭೆ ನಡೆಸಿತ್ತು. ಬಳಿಕ ಕೊಟ್ಟಾರ ಜಂಕ್ಷನ್ನಲ್ಲಿ ಸಭೆ ನಡೆಸಲಾಯಿತು. ಅದಾದ ಬಳಿಕ ಟಿಕೆಟ್ ಆಕಾಂಕ್ಷಿಗಳಾದ ಐವನ್ ಡಿಸೋಜ, ಜೆ.ಆರ್.ಲೋಬೋ, ಮೊದಿನ್ ಬಾವಾ, ಜಿ.ಎ.ಬಾವಾ ಅಲ್ಲಲ್ಲಿ ಬಹಿರಂಗ ಸಭೆ ನಡೆಸಲು ಇನ್ನಿಲ್ಲದ ಕಸರತ್ತು ನಡೆಸಿ ವಿಫಲರಾದರು. ಆದರೂ ಕೂಡ ಕೆಲವರು ಕಾರ್ಯಕರ್ತರಿಗೆ “ಊಟ” ಟಿಕೆಟ್ ಕೊಟ್ಟರೆ ಮರೆಯಬೇಡಿ ಎನ್ನುತ್ತಿದ್ದುದು ಗುಟ್ಟಾಗಿ ಉಳಿದಿಲ್ಲ.

ಒಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆಯೋ ಎಂಬುದಕ್ಕಿಂತಲೂ ಚಳಿ ಬಿಟ್ಟು ರಣರಂಗಕ್ಕಿಳಿದಿರುವುದು ಜೆಡಿಎಸ್ ಪಾಳಯದಲ್ಲಿ ಹೊಸ ಆತಂಕ ಸೃಷ್ಟಿಸಿದೆ.

ಬಿಜೆಪಿ ಮಕಾಡೆ ಮಲಗಿದರೆ, ಕೆಜೆಪಿ ಅಥವಾ ಜೆಡಿಎಸ್ ಅಥವಾ ಬಿಎಸ್ಆರ್ ಬದಲು ಕಾಂಗ್ರೆಸ್ಸೇ ಗತಿ ಎಂದು ಜನರಿಗೆ ಮನವರಿಕೆಯಾಗಿದೆ. ಹಾಗಾಗಿ ಇತರ ಪಕ್ಷದ ಶಾಸಕರು ಟಿಕೆಟ್ ಗಾಗಿ ಕಾಂಗ್ರೆಸ್ ನತ್ತ ವಲಸೆ ಹೋಗಲು ತಯಾರಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಸಚಿವ ಸ್ಥಾನದ ಕನಸನ್ನೂ ಕಾಣುತ್ತಿದ್ದಾರೆ. ಇದನ್ನೆಲ್ಲಾ ಕಾಂಗ್ರೆಸ್ ನಾಯಕರು ಯಾವ ರೀತಿ ಸ್ವೀಕರಿಸುತ್ತಾರೆ ಮತ್ತು ಬಳಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English