ವಾಮಂಜೂರು ಪ್ರವೀಣನಿಗೆ `ಗಲ್ಲು ಶಿಕ್ಷೆ’ ಆದೀತೇ?

11:04 AM, Tuesday, February 26th, 2013
Share
1 Star2 Stars3 Stars4 Stars5 Stars
(No Ratings Yet)
Loading...

Praven vaamanjurಮಂಗಳೂರು : ಪ್ರಣವ್ ಮುಖರ್ಜಿ ರಾಷ್ಟ್ರಪತಿ ಆದ ಬಳಿಕ ಇಬ್ಬರಿಗೆ ಗಲ್ಲು ಶಿಕ್ಷೆ ಜಾರಿಯಾಗಿದೆ. ಇದೀಗ ವೀರಪ್ಪನ್ ನ ನಾಲ್ವರು ಸಹಚರರು ಗಲ್ಲು ಶಿಕ್ಷೆ ಕ್ಷಣಗಣನೆ ಎದುರಿಸುತ್ತಿದ್ದಾರೆ. ಇವೆಲ್ಲದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ವಾಮಂಜೂರು ಪ್ರವೀಣನಿಗೆ `ಗಲ್ಲು ಶಿಕ್ಷೆ’ ಆದೀತೇ? ಅಥವಾ ಪಾರಾದನೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಉಪ್ಪಿನಂಗಡಿ ಮೂಲದ ಪ್ರವೀಣನು ವಾಮಂಜೂರಿನ ತನ್ನ ಸೋದರತ್ತೆ (ತಂದೆಯ ತಂಗಿ) ಅಪ್ಪಿ ಶೇರಿಗಾರ್ತಿ ಯ ಮನೆಯಲ್ಲೇ ದರ್ಜಿ ಕೆಲಸ ಮಾಡಿಕೊಂಡಿದ್ದ. ತೊಕ್ಕೊಟ್ಟು ಸಮೀಪದ ಕುತ್ತಾರ್ನ ಯುವತಿಯನ್ನು ಮದುವೆಯಾಗಿದ್ದ. ಅಪ್ಪಿಯ ಮಗಳು ಶಕುಂತಳಾ ವಿದೇಶದಿಂದ ಬಂದು ಆಗಷ್ಟೆ ಮರಳಿದ್ದರು. ಪ್ರವೀಣನು ಲಾಟರಿ ಚಟಕ್ಕೆ ಬಲಿಬಿದ್ದು ಸಾಕಷ್ಟು ಹಣ ಕಳಕೊಂಡಿದ್ದ. ಅಲ್ಲಲ್ಲಿ ಸಾಲ ಮಾಡಿದ್ದ. ಹೆಂಡತಿಯ ಚಿನ್ನಾಭರಣ ಅಡವಿಟ್ಟಿದ್ದ. ಇದರಿಂದ ತತ್ತರಿಸಿದ್ದ ಪ್ರವೀಣನು ಅತ್ತೆಯ ಅಳಿಯ ವಿದೇಶದಿಂದ ಹಣ ಅಥವಾ ಚಿನ್ನಾಭರಣ ತಂದಿರಬಹುದು ಎಂದು ಶಂಕಿಸಿ ಕುಟುಂಬದ ಎಲ್ಲ ಸದಸ್ಯರನ್ನೂ ಸಾಮೂಹಿಕ ಹತ್ಯೆ ಮಾಡಲು ನಿರ್ಧರಿಸಿದ್ದ.

ಅದರಂತೆ 1994 ಫೆ.23ರಂದು ರಾತ್ರಿ ಎಂದಿನಂತೆ ಅತ್ತೆ ಮನೆಗೆ ಹೋದ ಪ್ರವೀಣನು ಆಮ್ಲೆಟ್ ಮಾಡಿಸಿ ಅಪ್ಪಿ ಶೇರಿಗಾರ್ತಿ, ಮಗ ಗೋವಿಂದ, ಮಗಳು ಶಕುಂತಳಾ, ಮೊಮ್ಮಗಳು ದೀಪಿಕಾಳ ಜತೆಗೂಡಿ ಊಟ ಮಾಡಿದ್ದಾನೆ.

ಎಲ್ಲರೂ ನಿದ್ದೆ ಮಾಡಿದ ಬಳಿಕ ಪಿಕ್ಕಾಸಿನ ಹಿಡಿಯಿಂದ ಎಲ್ಲರ ತಲೆಗೆ ಬಡಿದು ಕೊಲೆ ಮಾಡಿದ್ದಾನೆ. ಹಾಗೇ ಹಿಂಬಾಗಿಲ ಮೂಲಕ ನೇರ ಹೊರ ಹೋಗಿದ್ದ. ಈ ಘಟನೆ ಮರುದಿನ ಬೆಳಗ್ಗೆ ಸುದ್ದಿಯಾಗಿತ್ತು. ಒಂದು ವಾರದವರೆಗೂ ನಾಲ್ಕು ಮಂದಿಯನ್ನು ಕೊಂದವರು ಯಾರು ಎಂಬುದು ತಿಳಿಯಲಿಲ್ಲ. ಆದರೆ, ಅಂದು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಹೆಡ್ಕಾನ್ ಸ್ಟೇಬಲ್ ಆಗಿದ್ದ ನಾರಾಯಣ ಬೈಂದೂರು ಪ್ರಕರಣದ ಜಾಡು ಹಿಡಿದು ಹೋದರು. ತನಗೆ ಸಿಕ್ಕ ಸಣ್ಣ ಸಣ್ಣ ಸುಳಿವನ್ನು ಜೋಡಿಸಿಕೊಂಡರು. ಹಾಗೇ ಅಪ್ಪಿ ಶೇರಿಗಾರ್ತಿ ಯ ತಮ್ಮನ ಮಗ ಪ್ರವೀಣನನ್ನು ಹಿಡಿದು ವಿಚಾರಿಸಿದರು. ಮೊದಲು ಪ್ರವೀಣ ಬಾಯಿ ಬಿಡಲಿಲ್ಲ. ಪೊಲೀಸರನ್ನೇ ದಾರಿ ತಪ್ಪಿಸಲು ಪ್ರಯತ್ನಿಸಿದ. ಆದರೆ, ಪ್ರವೀಣನ ಬಗ್ಗೆ ಪೊಲೀಸರಿಗೆ ಅನುಮಾನ ಹೆಚ್ಚಿತ್ತು. ಅದರಂತೆ ಮತ್ತೆ ವಿಚಾರಿಸಿದಾಗ ನಾಲ್ಕು ಮಂದಿಯನ್ನು ಕೊಂದಿರುವುದನ್ನು ಒಪ್ಪಿಕೊಂಡ. ಅದೂ ಕೇವಲ ಹಣಕ್ಕಾಗಿ!.

ಮಂಗಳೂರು ಗ್ರಾಮಾಂತರ ಇನ್ ಸ್ಪೆಕ್ಟರ್ ಪಾಪಯ್ಯರ ನೇತೃತ್ವದಲ್ಲಿ ತನಿಖೆ ನಡೆದು ಚಾರ್ಜ್ ಶೀಟ್ ಸಲ್ಲಿಸಲಾಯಿತು. ವಾದ-ವಿವಾದದ ಬಳಿಕ ದ.ಕ.ಜಿಲ್ಲಾ ಪ್ರದಾನ ಸೆಷನ್ಸ್ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬಹುದು ಎಂದು ಹೈಕೋರ್ಟ್ ಗೆ ಶಿಫಾರಸು ಮಾಡಿತು. ಅದರಂತೆ 2002 ಅಕ್ಟೋಬರ್ 28ರಂದು ರಾಜ್ಯ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತು. ಅದರ ವಿರುದ್ಧ ಪ್ರವೀಣ್ ಮೇಲ್ಮನವಿ ಸಲ್ಲಿಸಿದ. 2003ರ ಅಕ್ಟೋಬರ್ 15ರಂದು ಸುಪ್ರೀಂ ಕೋರ್ಟ್ ನ ಅಂದಿನ ನ್ಯಾಯಾಧೀಶರಾದ ಸಂತೋಷ್ ಹೆಗ್ಡೆ ಮತ್ತು ಬಿ. ಸಿಂಗ್ ನೇತೃತ್ವದ ಪೀಠ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿಯಿತು. ಅದನ್ನು ರದ್ದುಪಡಿಸುವಂತೆ ಹಿಂದಿನ ರಾಷ್ಟ್ರಪತಿ ಪ್ರತಿಭ ಪಾಟೀಲ್ಗೆ ಪ್ರವೀಣನು ಮನವಿ ಸಲ್ಲಸಿದ್ದ. ಇದೀಗ ಹಾಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯ ಮುಂದೆ ಪ್ರವೀಣನ ಅರ್ಜಿ ಬಂದಿದೆ. ಅವರು ಗಲ್ಲು ಶಿಕ್ಷೆಗೆ ಅಸ್ತು ಎನ್ನುತ್ತಾರಾ? ಅಥವಾ ರದ್ದುಪಡಿಸುತ್ತಾರಾ? ಎಂದು ಕಾದು ನೋಡಬೇಕಾಗಿದೆ. ಈ ಬಗ್ಗೆ ಜಿಲ್ಲೆಯ ಜನರಲ್ಲಿ ತೀವ್ರ ಕುತೂಹಲವೂ ಇದೆ.

ಘಟನೆ ನಡೆದ ಒಂದೇ ವಾರದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ಪ್ರವೀಣನು ಒಂದು ವರ್ಷದ ಬಳಿಕ ಅಂದರೆ, ಬೆಳಗಾವಿ ಜೈಲಿನಿಂದ ಮಂಗಳೂರಿಗೆ ಕರೆತರುವಾಗ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ. ಮತ್ತೆ ನಾಲ್ಕು ವರ್ಷಗಳ ಕಾಲ ಪ್ರವೀಣನ ಪತ್ತೆ ಇರಲಿಲ್ಲ.

ತನ್ಮಧ್ಯೆ ಅಪ್ಪಿ ಶೇರಿಗಾರ್ತಿಯ ಮತ್ತೊಬ್ಬ ಪುತ್ರ ಸೀತಾರಾಮ ಸಫಲ್ಯ `ಪ್ರವೀಣನ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು. ಆತ ಗೋವಾದ ಪಣಜಿಯ ಯುವತಿಯನ್ನು ಮದುವೆಯಾಗಿ ಅಲ್ಲೇ ನೆಲೆಸಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತು. ಅದಂತೆ ಪೊಲೀಸರು ಗೋವಾಕ್ಕೆ ತೆರಳಿ 1999ರಲ್ಲಿ ಬಂಧಿಸಿದ್ದು, ಪ್ರಸಕ್ತ ಪ್ರವೀಣನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.

ವೃತ್ತಿಯಲ್ಲಿ ದರ್ಜಿ ಯಾಗಿರುವ ಪ್ರವೀಣನು ಚಾಣಾಕ್ಷ ಬುದ್ಧಿಯವ. ಅನ್ನ ನೀಡಿದ ಕುಟುಂಬದ ನಾಲ್ಕು ಮಂದಿಯನ್ನು ಅತ್ಯಂತ ನಿರ್ದಯೆಯಿಂದ ಕೊಂದ ಈತನಿಗೆ ಗಲ್ಲು ಶಿಕ್ಷೆ ಆಗಲೇಬೇಕು. ಅದು ಇತರರಿಗೂ ಪಾಠವಾಗಬೇಕು ಎಂದು 19 ವರ್ಷದ ಹಿಂದೆ ಪ್ರವೀಣನ ಬಂಧನದಲ್ಲಿ ಪ್ರಮುಖ ಕೆಲಸ ಮಾಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣ ಬೈಂದೂರು ಅಭಿಪ್ರಾಯಪಡುತ್ತಾರೆ.

ನಾಲ್ಕು ಮಂದಿಯನ್ನು ಕೊಂದು ಹಾಕಿದ ಈತ ಮರುದಿನ ಸಮೀಪದ ಮನೆಯೊಂದಕ್ಕೆ  ಫೋನ್ ಮಾಡಿ `ಪೊಲೀಸ್ ನಾಯಿ ಬಂದಿದೆಯಾ?’ ಎಂದು ಕೇಳಿದ್ದ. ತಾನು ಚಿಲಿಂಬಿಯಲ್ಲಿರುವೆ ಎನ್ನುತ್ತಾ ತಂದೆ ಮತ್ತು ತಾಯಿಯನ್ನು ಮರಣದ ಮನೆಗೆ ಕಳುಹಿಸಿಕೊಟ್ಟಿದ್ದ. ಕೊಂದ ಬಳಿಕ ದೋಚಿದ ಚಿನ್ನಾಭರಣದ ಪೈಕಿ ಕೆಲವನ್ನು ಎರಡು ಫೈನಾನ್ ಸ್ನಲ್ಲಿ ಅಡವಿಟ್ಟಿದ್ದರೆ, ಇನ್ನು ಕೆಲವು ಚಿನ್ನಾಭರಣವನ್ನು ಅಡಗಿಸಿಟ್ಟಿದ್ದ.

ಖಾಸಾ ಅಕ್ಕ ಮತ್ತಾಕೆಯ ಮಕ್ಕಳನ್ನು ಕೊಂದವ ತನ್ನ ಮಗ ಎಂದು ಪ್ರವೀಣನ ತಂದೆಗೆ ಗೊತ್ತೇ ಇರಲಿಲ್ಲ. ಅವರು ಕೊಲೆಗಡುಕನ ಪತ್ತೆಯಾಗಿ ಹರಕೆಯಿಟ್ಟಿದ್ದರು. ವಾರದ ಬಳಿಕ ಮಗನ ಕೈಗೆ ಕೋಳ ತೊಡಿಸಿದ್ದನ್ನು ಕಂಡು ಅವರು ಮೂರ್ಚೆ ಹೋಗಿದ್ದರು. ಆವಾಗ ತಾನು ಕೊಲೆ ಮಾಡಿಲ್ಲ. ಪೊಲೀಸರ ಒತ್ತಡಕ್ಕೆ ಮಣಿದು ಕೊಲೆ ಮಾಡಿದ್ದನ್ನು ಒಪ್ಪಿಕೊಂಡೆ ಎಂದು ಸುಳ್ಳು ಹೇಳಿದ್ದ ಎಂದು ನಾರಾಯಣ ಬೈಂದೂರು ನೆನಪಿಸುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English