ಮತದಾರರಿಗೆ ಪಕ್ಷ ಕೊಟ್ಟ ವಾಗ್ದಾನಗಳನ್ನು ಪೂರೈಸಲು ಕಾರ್ಯಪ್ರವೃತ್ತರಾಗಿ : ಜನಾರ್ಧನ ಪೂಜಾರಿ

5:59 PM, Tuesday, March 19th, 2013
Share
1 Star2 Stars3 Stars4 Stars5 Stars
(No Ratings Yet)
Loading...

Congress publicity campaignಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದವರು ವಿಜಯೋತ್ಸವವನ್ನು ಆಚರಿಸುವುದಕ್ಕಿಂತ ಮಿಗಿಲಾಗಿ ಚುನಾವಣಾ ಅವಧಿಯಲ್ಲಿ  ಪಕ್ಷ ಮತದಾರರಿಗೆ ಕೊಟ್ಟ ವಾಗ್ದಾನಗಳನ್ನು ಈಡೇರಿಸಲು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರು ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡ ಮತದಾರರಿಗೆ ಕೃತಜ್ಞತೆ ಸಮರ್ಪಣೆ ಹಾಗೂ ವಿಧಾನ ಸಭೆ ಚುನಾವಣೆ ಪ್ರಚಾರ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದವರು ಮತ್ತು ಇತರೆ ಕಾರ್ಯಕರ್ತರು  ಒಟ್ಟಾಗಿ ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಗೆಲುವಿಗೆ ಸಿದ್ಧರಾಗಿ ಎಂದು ಅವರು ಈ ಸಂದರ್ಭ ಕರೆ ನೀಡಿದರು.

ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಕಾರ್ಯಕರ್ತರು ಪಕ್ಷದ ಕಾರ್ಯಗಳಲ್ಲಿ ತೊಡಗಿ ಆ ಮೂಲಕ ಪಕ್ಷವನ್ನು ಗಟ್ಟಿಗೊಳಿಸಬೇಕು. ಅಧಿಕಾರಕ್ಕಾಗಿ ಹೋರಾಟ ಮಾಡದೇ ಪರಸ್ಪರ ಪ್ರಾಮಾಣಿಕವಾಗಿ ತಮ್ಮ ತಮ್ಮ ಕಾರ್ಯಗಳನ್ನು ಮಾಡಿದಾಗ ಅಧಿಕಾರ ತಾನಾಗೆ ಹುಡುಕಿಕೊಂಡು ಬರುತ್ತದೆ ಎಂದವರು ಹೇಳಿದರು.

ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌, ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮತ್ತು ಶಾಸಕ ಬಿ. ರಮಾನಾಥ ರೈ, ಬ್ಲೋಸಂ ಫೆರ್ನಾಂಡಿಸ್‌, ಶಾಸಕರಾದ ಅಭಯಚಂದ್ರ ಜೈನ್‌, ಯು.ಟಿ. ಖಾದರ್‌, ಕಾಂಗ್ರೆಸ್‌ ಪ್ರಮುಖ ನಾಯಕರಾದ ವಸಂತ್‌ ವಿ. ಸಾಲ್ಯಾನ್‌, ಮಹಮ್ಮದ್‌ ಮಸೂದ್‌, ವಿನಯ್‌ ಕುಮಾರ್‌ ಸೊರಕೆ, ವಿಜಯ್‌ ಕುಮಾರ್‌ ಶೆಟ್ಟಿ, ಶಕುಂತಳಾ ಶೆಟ್ಟಿ, ಮಮತಾ ಗಟ್ಟಿ, ಐವನ್‌ ಡಿ’ಸೋಜಾ, ಪಿ.ವಿ. ಮೋಹನ್‌, ಮಿಥುನ್‌ ರೈ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿದ್ದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಂಗಳೂರು ಪಾಲಿಕೆಗೆ ಕಾಂಗ್ರೆಸ್‌ನಿಂದ ಗೆದ್ದವರಿಗೆ ಬಿ. ಜನಾರ್ದನ ಪೂಜಾರಿ ಪ್ರಮಾಣ ವಚನ ಬೋಧಿಸಿದರು. ಗೆಲುವಿಗೆ ಕಾರಣರಾದವರಿಗೆ ಅಭಿನಂದನೆ ಸಲ್ಲಿಸಿ, ಮುಂದೆ ಅಭಿವೃದ್ಧಿಯಲ್ಲಿ ಹೆಜ್ಜೆ ಇಡುವುದಾಗಿ ಪ್ರಮಾಣ ಸ್ವೀಕರಿಸಿದರು.

ಈ ಸಂದರ್ಭ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಂಗಳೂರು ಪಾಲಿಕೆಗೆ ಕಾಂಗ್ರೆಸ್‌ನಿಂದ ಗೆದ್ದವರಿಗೆ, ಹಾಗು  ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದ ಪಕ್ಷದ ಮುಖಂಡರಿಗೆ  ಜನಾರ್ದನ ಪೂಜಾರಿ ಪ್ರಮಾಣವಚನ ಬೋಧಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English