ಮಂಗಳೂರು: ವರ್ಷ ಪ್ರತಿಯಂತೆ ಈ ಸಲವೂ ಷಷ್ಠಿ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಎಡೆಸ್ನಾನ ಸೇವೆ ಇಂದು ಮಧ್ಯಾಹ್ನ ನಡೆಯಿತು.
ಸುಮಾರು 134 ಮಂದಿ ಪುರುಷರು, ಮಹಿಳೆಯರು ಈ ಎಡೆಸ್ನಾನ ಸೇವೆಯಲ್ಲಿ ಭಾಗವಹಿಸಿದ್ದರು. ಶ್ರೀ ದೇವರ ಮಧ್ಯಾಹ್ನದ ಪೂಜೆಯ ನಂತರ ದೇವಾಲಯದ ಗರ್ಭ ಗುಡಿಯ ಸುತ್ತಲೂ 108 ಎಲೆ ಹಾಕಿ ಅದಕ್ಕೆ ಅನ್ನ, ಸಾರು, ಪಲ್ಯ, ಸಾಂಬಾರ್, ಮಜ್ಜಿಗೆ ಬಡಿಸಲಾಯಿತು. ಬಳಿಕ ದೇವಾಲಯದ ಗೋವುಗಳಿಂದ ತಿನ್ನಿಸಲಾಯಿತು. ಉಳಿದ ಶೇಷ ಅನ್ನದ ಮೇಲೆ ಭಕ್ತರು ಉರುಳು ಸೇವೆ ಮಾಡಿ ಎಡೆಸ್ನಾನವನ್ನು ಭಕ್ತಿಯಿಂದ ನೆರವೇರಿಸಿದರು.
ವಿವಾದಿತವಾದ ಮಡೆಸ್ನಾನವನ್ನು ಸುಪ್ರೀಂ ಕೋರ್ಟ್ ನಿಷೇಧ ಮಾಡಿದ ನಂತರ ಈಗ ಭಕ್ತರಿಗಾಗಿ ಎಡೆಸ್ನಾನವನ್ನು ದೇವಾಲಯದ ವತಿಯಿಂದ ನೆರವೇರಿಸಲಾಗುತ್ತಿದೆ. ಈ ಬಗ್ಗೆ ಸುಬ್ರಹ್ಮಣ್ಯ ಕ್ಷೇತ್ರದ ಆಗಮ ಪಂಡಿತರು ಮಾತನಾಡಿ, ಚಂಪಾ ಷಷ್ಠಿಯ ಪ್ರಯುಕ್ತ ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಕೋರ್ಟ್ ನಿರ್ದೇಶನದಂತೆ ಎಡೆಸ್ನಾನ ಮಾಡಲಾಗುತ್ತಿದೆ. ಹಸುಗಳು ಪ್ರಸಾದವನ್ನು ತಿಂದ ಎಲೆಯಲ್ಲಿ ಉರುಳು ಸೇವೆ ಮಾಡಲಾಗುತ್ತದೆ. ಎಲ್ಲಾ ರೋಗಗಳು ನಿವಾರಣೆ ಆಗಬೇಕೆಂದು, ಭಕ್ತಾದಿಗಳಿಗೆ ಎಲ್ಲಾ ಅನುಕೂಲ ಆಗಲೆಂದು ಈ ಹರಕೆಯನ್ನು ನೆರವೇರಿಸಲಾಗುತ್ತದೆ ಎಂದರು.
Click this button or press Ctrl+G to toggle between Kannada and English