ಕಾರವಾರ : ಇಲ್ಲೊಬ್ಬ ವ್ಯಕ್ತಿ ಕಾಳಿ ನದಿಯ ಹಿನ್ನೀರಿಲ್ಲಿಕೊಚ್ಚಿ ಹೋಗಿ ಗಿಡ ಹಿಡಿದುಕೊಂಡು ಸತತ ಮೂರು ದಿನ ಸಾವು-ಬದುಕಿನ ಮಧ್ಯೆ ಹೋರಾಡಿ ಸಾವನ್ನೇ ಗೆದ್ದು ಬಂದ ಘಟನೆ ಕಾರವಾರ ತಾಲೂಕಿನ ಹಣಕೋಣದಲ್ಲಿ ನಡೆದಿದೆ.
ಮೇ 16ರಂದು ಜಾನುವಾರನ್ನು ಹುಡುಕಿಕೊಂಡು ಬರುವುದಾಗಿ ಕಟರಾಯ್ ಕೋಠಾರಕರ್ ಎಂಬ ವ್ಯಕ್ತಿ ಹೊರಹೋಗಿದ್ದರು. ಆ ವೇಳೆ ತೌಕ್ತೆ ಚಂಡಮಾರುತ ಅಬ್ಬರಿಸುತ್ತಲೇ ಇತ್ತು. ಅವರೂ ವಾಪಸ್ ಬಾರದಿದ್ದಾಗ ಭಯಗೊಂಡ ಮಗ ಎಲ್ಲೆಡೆ ಹುಡುಕಾಡಿದ್ದಾರೆ. ಗ್ರಾಮಸ್ಥರೊಂದಿಗೆ ಹಳ್ಳ, ಬಾವಿ ಎಲ್ಲೆಡೆ ಹುಡುಕಾಡಿದ್ದು, ಎರಡು ದಿನವಾದರೂ ಪತ್ತೆಯಾಗಿಲಿಲ್ಲ.
ಮೂರನೇ ದಿನ ಕಾಳಿ ನದಿಯ ಹಿನ್ನೀರಿನಲ್ಲಿ ಗಿಡವೊಂದನ್ನು ಹಿಡಿದುಕೊಂಡು ವೃದ್ಧ ಬದುಕಿರುವುದು ಗೊತ್ತಾಗಿದೆ. ಕೂಡಲೇ ಗ್ರಾಮಸ್ಥರು ನೀರಿಗೆ ಇಳಿದು ಆತನನ್ನು ರಕ್ಷಣೆ ಮಾಡಿದ್ದಾರೆ. ಮೂರು ದಿನ ನೀರಿನಲ್ಲಿದ್ದ ಕಾರಣ ಕಟರಾಯ್ ಕೋಠಾರಕರ್ರ ಆರೋಗ್ಯ ಸ್ವಲ್ಪ ಹದಗೆಟ್ಟಿದೆ. ಸದ್ಯ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ.
Click this button or press Ctrl+G to toggle between Kannada and English