ಎಫ್‌ಡಿಐ, ಜಿಎಸ್‌ಟಿ ಇರಲಿ ಮಾರಕ ಕಾನೂನು ತೊಲಗಲಿ

12:35 PM, Friday, February 28th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Narendra-Modiನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಪಕ್ಷದ ಆರ್ಥಿಕ ನೀತಿಯನ್ನು ಬಹಿರಂಗಪಡಿಸಿದ್ದಾರೆ. ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಸರಕು ಹಾಗೂ ಸೇವೆಗಳ ತೆರಿಗೆ(ಜಿಎಸ್‌ಟಿ) ಪಕ್ಷದ ವಿರೋಧವಿಲ್ಲ ಎಂದಿದ್ದಾರೆ.

ಜಿಎಸ್‌ಟಿ ಜಾರಿಗೆ ಸಂಬಂಧಿಸಿ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಇದರ ಅನುಷ್ಠಾನಕ್ಕೆ ಬೇಕಾದ ಪೂರ್ವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜಿಎಸ್‌ಟಿ ಜಾರಿಗೂ ಮುನ್ನ ಮಾಹಿತಿ ತಂತ್ರಜ್ಞಾನ ಎಲ್ಲೆಡೆ ಲಭ್ಯವಾಗಬೇಕಿದೆ. ಜತೆಗೆ, ರಾಜ್ಯ ಸರ್ಕಾರಗಳಿಗೆ ಹಣಕಾಸಿಗೆ ಸಂಬಂಧಿಸಿ ಒಂದಷ್ಟು ಕಳವಳಗಳಿವೆ. ಅವುಗಳನ್ನೂ ಕೇಂದ್ರ ಪರಿಹರಿಸಬೇಕಿದೆ ಎಂದು ಮೋದಿ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶದ ಎಲ್ಲ ಕ್ಷೇತ್ರದಲ್ಲೂ ವಿದೇಶಿ ನೇರ ಬಂಡವಾಳ ಹೂಡಿಕೆಯ ಅಗತ್ಯವನ್ನು ಒತ್ತಿ ಹೇಳಿದ ಅವರು ಇದರಿಂದ ಸೃಷ್ಟಿಯಾಗುವ ಸವಾಲುಗಳನ್ನು ಎದುರಿಸಲು ಉದ್ಯಮಿಗಳು ಸಿದ್ಧರಾಗಬೇಕು ಎಂದು ಸಲಹೆ ನೀಡಿದ್ದಾರೆ. ದೆಹಲಿಯಲ್ಲಿ ಗುರುವಾರ ಬ್ಯಾಂಕರ್ಸ್‌ಗಳು ಹಾಗೂ ಉದ್ಯಮಿಗಳ ಜತೆಗೆ ಸರಣಿ ಸಂವಾದ ನಡೆಸಿದ ಅವರು ಈ ವಿಚಾರ ತಿಳಿಸಿದ್ದಾರೆ.

ಸವಾಲುಗಳಿಗೆ ಓಡಿಹೋಗಬೇಡಿ: ವ್ಯಾಪಾರಿ ಸಮುದಾಯ ಅಂತಾರಾಷ್ಟ್ರೀಯ ಸವಾಲುಗಳಿಂದ ದೂರ ಓಡಬೇಡಿ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ಸವಾಲುಗಳನ್ನು ನಾವು ಅವಕಾಶಗಳನ್ನಾಗಿ ಬದಲಾಯಿಸಿಕೊಳ್ಳಬೇಕು.

ದೇಶದ ಅಭಿವೃದ್ಧಿಗೆ ವಿಕೇಂದ್ರೀಕರಣವೇ ಪ್ರಮುಖ ಕೀಲಿಕೈ ಆಗಿದೆ. ಪ್ರಧಾನಿ ಮತ್ತು ಕ್ಯಾಬಿನೆಟ್‌ನಿಂದ ಮಾತ್ರವಲ್ಲ ಬದಲಾಗಿ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಒಂದಾಗಿ ನಿರ್ಧಾರ ತೆಗೆದುಕೊಳ್ಳಬೇಕು. ದೆಹಲಿಯಲ್ಲಿ ಕೂತು ದೇಶವನ್ನು ಮುನ್ನಡೆಸುವ ಪ್ರವೃತ್ತಿ ನಿಲ್ಲಬೇಕು. ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು.   ರಾಜ್ಯದ ಸಾಮರ್ಥ್ಯ ಗೌರವಿಸಬೇಕು.

ಸರ್ಕಾರ ಎಲ್ಲರನ್ನೂ ಕಳ್ಳರು ಎಂದು ಭಾವಿಸಿದೆ. ಈ ಮನಸ್ಥಿತಿ ಬದಲಾಗಬೇಕು. ಇಂಥ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಸರ್ಕಾರ ಮತ್ತು ಸಮಾಜದ ನಡುವೆ ಪರಸ್ಪರ ನಂಬಿಕೆ ಇರಬೇಕು. ವ್ಯವಸ್ಥೆಯೊಂದನ್ನು ನಂಬಿಕೆಯಿಂದ ಮುನ್ನಡೆಸಲು ಸಾಧ್ಯವೇ ಹೊರತು ಕಾನೂನಿನಿಂದಲ್ಲ. ಇದು ಆಡಳಿತದ ಮೂಲ ಸಿದ್ಧಾಂತ. ವ್ಯವಸ್ಥೆ ಹಾಳಾದಾಗ ಮಾತ್ರ ಕಾನೂನು ಮಧ್ಯಪ್ರವೇಶಿಸುತ್ತದೆ. ದೇಶದಲ್ಲಿ ಸಾಕಷ್ಟು ಕಾನೂನುಗಳಿವೆ. ನೀವು ನಮಗೆ ಶಕ್ತಿ ಕೊಡಿ. ಪ್ರತಿ ವಾರ ಒಂದೊಂದು ಕಾನೂನನ್ನು ಹಿಂಪಡೆಯುತ್ತೇವೆ.

ಭ್ರಷ್ಟಾಚಾರದ ಕುರಿತು ಶೂನ್ಯ ಸಹಿಷ್ಣುತೆ ನೀತಿ ಬೆಳೆಸಿಕೊಳ್ಳಬೇಕು. ಸರ್ಕಾರದ ಉನ್ನತ ಹುದ್ದೆಯಲ್ಲಿರುವವರ ಕುರಿತು ನಿರ್ಧಾರ ಸ್ಪಷ್ಟವಾಗಿದ್ದಾಗ ಪರಿಸ್ಥಿತಿ ಬದಲಾಗಬಹುದು. ಹಾಗಾಗಿ ಭ್ರಷ್ಟಾಚಾರಕ್ಕೆ ಮೈತ್ರಿಕೂಟವನ್ನೇ ಹೊಣೆ ಮಾಡಬಾರದು.

ಆರ್ಥಿಕತೆ ಬಗ್ಗೆ ನನ್ನ ಜ್ಞಾನ ತುಂಬಾ ಕಡಿಮೆ ಅದನ್ನು ಬರೆಯಬೇಕಾದರೆ ಪೋಸ್ಟಲ್ ಸ್ಟ್ಯಾಂಪ್‌ನ ಅಗತ್ಯವೂ ಬೀಳುವುದಿಲ್ಲ. ದೇಶದ ಸಂಪನ್ಮೂಲಗಳ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕೇ ಹೊರತು ಮಾಲೀಕರ ಮೇಲಲ್ಲ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English