ಮಂಗಳೂರು : ದಕ್ಷಿಣಕನ್ನಡ ಜಿಲ್ಲೆ ಹೆಸರನ್ನು ಮಂಗಳೂರು ಜಿಲ್ಲೆ ತುಳುನಾಡು ಮತ್ತಿತರ ಹೆಸರು ಸೂಕ್ತವೆಂದು ಸಾರ್ವಜನಿಕರ ತಮ್ಮ ಅಭಿಪ್ರಾಯಗಳನ್ನು ಸೂಚಿಸುತ್ತಿದ್ದು, ಮಂಗಳೂರು ಜಿಲ್ಲೆ ಎಂಬುದಾಗಿ ಮಾರ್ಪಾಡು ಮಾಡುವ ವಿಚಾರವು ಅತೀ ಸೂಕ್ಷ್ಮ ವಿಚಾರವಾಗಿರುವುದರಿಂದ ಜಿಲ್ಲೆಯ ಜನ ದಕ್ಷಿಣಕನ್ನಡ ಎಂಬ ಹೆಸರಿನೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿರುವುದರಿಂದ ಜಿಲ್ಲೆಯ ಹೆಸರನ್ನು ದಕ್ಷಿಣಕನ್ನಡ ಎಂದೇ ಮುಂದುವರಿಸುವಂತೆ ಹಾಗೂ ಜಿಲ್ಲೆಗೆ ಮರು ನಾಮಕರಣ ಆವಶ್ಯಕತೆ ಇಲ್ಲವೆಂಬುದಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಮ್ಮ ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ರಾಜ್ಯದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳಿಗೆ ಜುಲೈ 17 ರಂದು ಪತ್ರ ಬರೆದು ತಿಳಿಸಿದ್ದಾರೆ.
ಬ್ರಿಟಿಷರ ಆಡಳಿತಾವಧಿಯಲ್ಲಿ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ ಸೌತ್ ಕೆನರಾ ಜಿಲ್ಲೆ ನಂತರ ದಕ್ಷಿಣಕನ್ನಡ ಜಿಲ್ಲೆ ಎಂದು ಮಾರ್ಪಾಡಾಗಿದ್ದು. ಕೆನರಾ ಎಂಬ ಹೆಸರಿಗೆ ಚಾರಿತ್ರಿಕ ಹಾಗೂ ಪಾರಂಪರಿಕ ಹಿನ್ನಲೆ ಇದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಮಂಗಳೂರು ಎಂಬುದು ದಕ್ಷಿಣಕನ್ನಡ ಜಿಲ್ಲೆಯ ಕೇಂದ್ರಸ್ಥಾನವಾಗಿದ್ದು,ಬಹುಭಾಷೆಗಳ,ಬಹುಧರ್ಮಗಳ,ಬಹು ಸಂಸ್ಕೃತಿಗಳ ಸಮನ್ವಯದ ವಿಶಿಷ್ಟ ಪ್ರದೇಶವಾಗಿದ್ದು, ಇಲ್ಲಿ ಕನ್ನಡ, ತುಳು, ಕೊಂಕಣಿ, ಬ್ಯಾರಿ, ಬೋವಿ, ಮಲಯಾಳಂ, ಮಾರಾಠಿ ಇತರೆ ಭಾಷೆಗಳನ್ನು ಮಾತನಾಡುವ ಜನರು ವಾಸಿಸುತ್ತಿದ್ದಾರೆ.
ಮಂಗಳೂರನ್ನು ತುಳುವಿನಲ್ಲಿ ಕುಡ್ಲ, ಕೊಂಕಣಿಯಲ್ಲಿ ಕೊಡಿಯಾಲ, ಬ್ಯಾರಿ ಭಾಷೆಯಲ್ಲಿ ಮೈಕಾಲ ,ಸಂಸ್ಕೃತ ಮತ್ತು ಮಲೆಯಾಳಂ ಭಾಷೆಯಲ್ಲಿ ಮಂಗಲಾಪುರಂ, ಇಂಗ್ಲೀಷ್ನಲ್ಲಿ ಮ್ಯಾಂಗಲೂರ್ ಎಂದು ಕರೆಯಲಾಗುತ್ತಿತ್ತು. ಆದ್ದರಿಂದ ಜಿಲ್ಲೆಯ ಹೆಸರು ದಕ್ಷಿಣಕ ನ್ನಡ ಎಂದೇ ಮುಂದುವರೆಯುವಂತೆ ಜಿಲ್ಲಾಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English