ಮಂಗಳೂರು : ಕಳೆದ ಶುಕ್ರವಾರ ಮಧ್ಯಾನ್ಹದ ನಮಾಜಿಗೆಂದು ಗುರುಪುರದ ಮಸೀದಿಯೊಂದಕ್ಕೆ ಹಿರೋ ಹೋಂಡ ಬೈಕಿನಲ್ಲಿ ತೆರಳುತಿದ್ದ ವೇಳೆ ಕಪ್ಪು ಸ್ಕಾರ್ಪಿಯೋ ವಾಹನದಲ್ಲಿ ಬಂದ ಅಪರಿಚಿತ ಹಂತಕರ ತಂಡ ಗುರುಪುರದ ಬಂಡಸಾಲೆ ಬಳಿ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ, ಕೆಳಗೆ ಬಿದ್ದ ಕಬೀರನನ್ನು ಕೊಚ್ಚಿ ಕೊಲೆಗೈದಿತ್ತು. ಘಟನೆಯ ಐದು ದಿನಗಳ ಬಳಿಕ ದ.ಕ.ಜಿಲ್ಲಾ ಪೊಲೀಸರ ವಿಶೇಷ ತಂಡವು ನಡೆಸಿದ ತ್ವರಿತ ಕಾರ್ಯಚರಣೆಯಲ್ಲಿ ಕಬೀರ್ ಕೊಲೆ ಪ್ರಕರಣದ 6 ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹಾವೇರಿ ನಿವಾಸಿ ರವಿ ಯಾನೆ ಟಿಕ್ಕಿ ರವಿ ಯಾನೆ ಅಣ್ಣಪ್ಪ ಸ್ವಾಮಿ, ತೊಕ್ಕೊಟ್ಟು ನಿವಾಸಿ ನಾಗ ಯಾನೆ ನಾಗರಾಜ ಪೂಜಾರಿ, ತೋಕುರು ನಿವಾಸಿ ತಿಲಕ್ರಾಜ್ ಶೆಟ್ಟಿ, ಉಳ್ಳಾಲ ನಿವಾಸಿ ಸಹನ್ ಯಾನೆ ಶಾನ್, ಕೋಡಿಕೆರೆ ನಿವಾಸಿ ಚೇತನ್ ಯಾನೆ ಚೇತು, ತೋಕುರು ನಿವಾಸಿ ಲೋಕೆಶ್ ಯಾನೆ ಲೋಕು ಎಂಬವರನ್ನು ಬಜ್ಪೆ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಪೊಲೀಸ್ ಅಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಇಂದು ಕರೆದ ಪತ್ರಿಕಾಗೋಷ್ಠಿ ಯಲ್ಲಿ ಪ್ರಕರಣದ ಬಗ್ಗೆ ತಿಳಿಸಿದರು. ಬಂದಿತರಲ್ಲಿ ವಿಧ್ಯಾರ್ಥಿ ಸಹನ್ (16) ಎಂಬಾತನನ್ನು ಹೊರತು ಪಡಿಸಿ ಉಳಿದ ಎಲ್ಲಾ ಅರೋಪಿಗಳು ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ, ದುಷ್ಕರ್ಮಿಗಳು ತಮ್ಮ ದುಷ್ಕೃತ್ಯಕ್ಕೆ ಬಳಸಿದ ವಾಹನವನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಬಗ್ಗೆ ಅನುಮಾನಗಳಿದ್ದು, ಅವರನ್ನು ಕೂಡ ನಮ್ಮ ವಿಶೇಷ ತಂಡದ ಪೊಲೀಸರು ಅತೀ ಶೀಘ್ರದಲ್ಲಿಯೇ ಬಂದಿಸಲಿದ್ದಾರೆ ಎಂದು ಹೇಳಿದರು.
ಆರೋಪಿಗಳು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಚೇತನ್ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಒಂದು ಹಾಗೂ ಸುರತ್ಕಲ್ ಠಾಣೆಯಲ್ಲಿ2 ಮೊಕದ್ದಮೆ ದಾಖಲಾಗಿರುತ್ತದೆ. ತಿಲಕ್ರಾಜ್ ವಿರುದ್ದ ಉಪ್ಪಿನಂಗಡಿ ಹಾಗೂ ಕಾವೂರು ಠಾಣೆಯಲ್ಲಿ ಒಂದೊಂದು ಮೊಕದ್ದಮೆ ದಾಖಲಾಗಿರುತ್ತದೆ. ಟಿಕ್ಕಿ ರವಿ ವಿರುದ್ದ ಒಂದು ಉರ್ವಾ ಠಾಣೆಯಲ್ಲಿ 4 ಕಾವೂರು ಠಾಣೆಯಲ್ಲಿ 5 ಬರ್ಕೆ ಠಾಣೆಯಲ್ಲಿ ಹಾಗೂ 2ಬಂದರು ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿರುತ್ತದೆ. ಲೋಕೆಶ್ ವಿರುದ್ದ 11 ಪಣಂಬೂರು ಠಾಣೆಯಲ್ಲಿ ಮತ್ತು 2 ಸುರತ್ಕಲ್ ಠಾಣೆಯಲ್ಲಿ ಮೊಕದ್ದಮ್ಮೆ ದಾಖಲಾಗಿರುತ್ತದೆ. ನಾಗರಾಜ ವಿರುದ್ಧ ಉಪ್ಪಿನಂಗಡಿ ಹಾಗೂ ಪಣಂಬೂರು ಠಾಣೆಗಳಲ್ಲಿ ಒಂದೊಂದು ಮೊಕ್ಕದ್ದಮೆ ದಾಖಲಾಗಿರುತ್ತದೆ.
ಕೊಲೆ ಪ್ರಕರಣದ ಅರೋಪಿಗಳನ್ನು ಕೆಲವೇ ದಿನಗಳಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಪಣಂಬೂರು ಉಪವಿಭಾಗದ ಎಸಿಪಿ ಪುಟ್ಟ ಮಾದಯ್ಯ ಅವರ ವಿಶೇಷ ತಂಡಕ್ಕೆ 10ಸಾವಿರರ ರೂಪಾಯಿ ಬಹುಮಾನವನ್ನು ಅಯುಕ್ತರು ಪ್ರಕಟಿಸಿದ್ದಾಗಿ ತಿಳಿಸಿದರು.
Click this button or press Ctrl+G to toggle between Kannada and English