ಗೋಸಂರಕ್ಷಣೆಗಾಗಿ ಜು. 13 ರಂದು ಕರಾವಳಿ ಜಿಲ್ಲೆಗಳ ಬೃಹತ್‌ ಪ್ರತಿಭಟನೆ

8:14 PM, Thursday, July 9th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
VHP Rally

ಮಂಗಳೂರು : ಗೋಹತ್ಯೆ, ಗೋ ಕಳ್ಳ ಸಾಗಾಟ, ಪ್ರಕರಣಗಳನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌, ಗೋಸಂರಕ್ಷಣಾ ಸಮಿತಿ ವತಿಯಿಂದ ಕರಾವಳಿ ಜಿಲ್ಲೆಗಳ ಬೃಹತ್‌ ಪ್ರತಿಭಟನೆ ಜು. 13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್‌, ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಗೋಹತ್ಯೆ, ದನಗಳ ಸರಣಿ ಕಳ್ಳತನ, ಹಿಂಸಾತ್ಮಕ ರೀತಿಯ ಸಾಗಾಟದಂತಹ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಗುಡ್ಡದಲ್ಲಿ ಮೇಯಲು ಬಿಟ್ಟ ದನಗಳು ಸುರಕ್ಷಿತವಾಗಿ ಮರಳುತ್ತವೆ ಎಂಬ ನಂಬಿಕೆ ಇಲ್ಲದಾಗಿದೆ. ಹಟ್ಟಿಯಲ್ಲಿ ಕಟ್ಟಿ ಹಾಕಿದ ದನಕರುಗಳನ್ನು ರಾತ್ರಿ ಅಪಹರಿಸಿ ಹತ್ಯೆಗೈಯುವ ಕೃತ್ಯಗಳೂ ನಡೆಯುತ್ತಿವೆ. ಪದೇಪದೇ ಇಂತಹ ಘಟನೆ ಸಂಭವಿಸುತ್ತಿದ್ದರೂ ರಾಜ್ಯ ಸರಕಾರ ಮತ್ತು ಪೊಲೀಸ್‌ ಇಲಾಖೆ ನಿರ್ಲಕ್ಷé ವಹಿಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಗೂ ಮುನ್ನ ಬೃಹತ್‌ ವಾಹನ ಜಾಥಾ ನಡೆಯಲಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಸುಮಾರು 10,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಉಡುಪಿ, ಮೂಡಬಿದಿರೆ, ಧರ್ಮಸ್ಥಳ, ಪುತ್ತೂರು, ತಲಪಾಡಿ ಮುಂತಾದೆಡೆಗಳಿಂದ ಬರುವ ವಾಹನ ಜಾಥಾ ಬಳಿಕ ಪಣಂಬೂರು, ಕುಡುಪು, ಅಡ್ಯಾರು ಹಾಗೂ ಮಹಾವೀರ ವೃತ್ತಗಳಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಬಂದು ಸಂಜೆ 4ಕ್ಕೆ ಕೇಂದ್ರ ಮೈದಾನದಲ್ಲಿ ಸೇರಲಿದ್ದಾರೆ ಎಂದು ಗೋಸಂರಕ್ಷಣಾ ಸಮಿತಿ ಸಂಚಾಲಕ ಡಾ| ಪಿ. ಅನಂತಕೃಷ್ಣ ಭಟ್‌ ತಿಳಿಸಿದರು.

ಬಜರಂಗದಳ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌, ವಿಹಿಂಪ ಅಧ್ಯಕ್ಷ ಜಗದೀಶ್‌ ಶೇಣವ, ವಿಹಿಂಪ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಕಾರ್ಯದರ್ಶಿ ಗೋಪಾಲ್‌, ಬಜರಂಗದಳ ಸಂಚಾಲಕ ಭುಜಂಗ ಕುಲಾಲ್‌ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English