ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ 12 ವರ್ಷ ಆರು ತಿಂಗಳ ಸೇವಾವಧಿಯಲ್ಲಿ ಸಹಕಾರ ನೀಡಿದ ಎಲ್ಲ ರಿಗೂ ಮುಖ್ಯ ಯೋಜನಾಧಿಕಾರಿ ಶ್ರೀ ಪಿ ತಾಕತ್ ರಾವ್ ಅವರು ಕೃತಜ್ಞತೆ ಸಲ್ಲಿಸಿದರು.
ಇಂದು ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರ ನೆರವಿನಿಂದ ತಮ್ಮ ಕೆಲಸ ಸುಗಮವಾಗಿ ಸಾಗಿದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಸ್ವಚ್ಛತಾಂದೋಲನದಲ್ಲಿ ಜಿಲ್ಲೆಯ ಯಶೋಗಾಥೆ ಹಾಗೂ ಇದಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು.
ಮುಖ್ಯ ಯೋಜನಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ನಝೀರ್ ಅವರು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಎಲ್ಲರ ಸಹಕಾರ ಕೋರಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಅವರು ಮಾತನಾಡಿ, ಸರಳ, ಸಜ್ಜನ, ಪ್ರಾಮಾಣಿಕತೆ ಹಾಗೂ ಕೃತಿಯಲ್ಲಿ ನಂಬಿಕೆ ಇರಿಸಿದ ವ್ಯಕ್ತಿ ತಾಕತ್ ರಾವ್ ಅವರು ಎಲ್ಲರ ಮನಸ್ಸನ್ನು ತಮ್ಮ ನಡವಳಿಕೆಯಿಂದ ಗೆದ್ದಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್ ಅವರು ಮಾತನಾಡಿದರು.
ಸಿಇಒ ಶ್ರೀ ಕೆ. ಶಿವರಾಮೇಗೌಡ ಅವರು ತಾಕತ್ ರಾವ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಶುಭ ಹಾರೈಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರು, ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಹ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಮಸಗುಪ್ಪಿ ಅವರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಪಿ. ನಾಗೇಂದ್ರ ಅವರು ವಂದಿಸಿದರು.
Click this button or press Ctrl+G to toggle between Kannada and English