ಮಂಗಳೂರು ವಿಶೇಷ ಆರ್ಥಿಕ ವಲಯದ ಸಿಬ್ಬಂದಿ ಭಾರಿ ಯಂತ್ರಕ್ಕೆ ಸಿಕ್ಕಿ ಸಾವು

6:32 PM, Friday, July 8th, 2011
Share
1 Star2 Stars3 Stars4 Stars5 Stars
(No Ratings Yet)
Loading...

JONSON/ಜಾನ್ಸನ್‌ಮಂಗಳೂರು: ಇಂದು ಮುಂಜಾನೆ ಮಂಗಳೂರು ವಿಶೇಷ ಆರ್ಥಿಕ ವಲಯದ ಕಳವಾರು ಪ್ರದೇಶದಲ್ಲಿ ಕ್ರೇನ್‌ನಿಂದ ಸಾಗಿಸುತ್ತಿದ್ದ ಯಂತ್ರವೊಂದು ತುಂಡಾಗಿ ಬಿದ್ದ ಪರಿಣಾಮ ಗುರುಪುರದ ಜಾನ್ಸನ್ ಸಂತೋಷ ರೊಝಾರಿಯೊ (21)ಮೃತ ಪಟ್ಟಿದ್ದಾರೆ.ಈ ದುರ್ಘಟನೆ ಮುಂಜಾನೆ 9:45ರ ಸುಮಾರಿಗೆ ಸಂಭವಿಸಿದೆ.ಜಾನ್ಸನ್ ಎಂಆರ್‌ಪಿಎಲ್‌ನ ತೃತೀಯ ಹಂತದ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಕ್ರೇನ್‌ನಿಂದ ಭಾರೀ ಯಂತ್ರೋಪಕರಣ ಆಕಸ್ಮಿಕವಾಗಿ ತುಂಡಾಗಿ ಬಿದ್ದ ಪರಿಣಾಮ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ಜಾನ್ಸನ್‌ರ ಎದೆ ಹಾಗೂ ತಲೆ ಮೇಲೆ ಬಿದ್ದು ಅವರು ಮಾರಣಾಂತಿಕವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಕೊನೆಯುಸಿರೆಳೆದರು. ಈ ಘಟನೆಗೆ ಆಡಳಿತಗಾರರ ನಿರ್ಲಕ್ಷವೇ ಕಾರಣ ಎಂದು ಕಂಪೆನಿಯ ಕಾರ್ಮಿಕರು ಆರೋಪಿಸಿದ್ದಾರೆ.ಇಲ್ಲಿ ಈಗಾಗಲೇ ಮೂರು ಕ್ರೇನ್ ಮುರಿದು ಬಿದ್ದು ಅವಘಡಗಳು ಸಂಭವಿಸಿದರೂ ಸುರಕ್ಷಾ ಕ್ರಮವನ್ನು ಕಾಮಗಾರಿಯ ಮೇಲುಸ್ತುವಾರಿ ನಡೆಸುತ್ತಿರುವವರು ಕೈಗೊಂಡಿಲ್ಲ, ಭಾರೀ ಯಂತ್ರೋಪಕರಣಗಳನ್ನು ಸಾಗಿಸುವ ಬಹುಕೋಟಿ ರೂ.ವೆಚ್ಚದ ಕಾಮಗಾರಿ ನಡೆಯುತ್ತಿದ್ದರೂ ಇಲ್ಲಿಯ ಕೆಲಸಗಾರರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ.ಅಫಘಾತಗಳು ಸಂಭವಿಸಿದರೂ ತುರ್ತು ಚಿಕಿತ್ಸೆ ಒದಗಿಸುವ ವ್ಯವಸ್ಥೆಯೂ ಇಲ್ಲ ಎಂದು ಕಂಪೆನಿಯ ಕಾರ್ಮಿಕರು ಆರೋಪಿಸಿದ್ದಾರೆ. ಮೃತರ ಕುಟುಂಬದವರಿಗೆ ಪರಿಹಾರ ಒದಗಿಸುವ ಭರವಸೆಯನ್ನು ಕಂಪೆನಿಯ ಅಧಿಕಾರಿಗಳು ನೀಡಿದರೂ,ಈ ಭರವಸೆ ಕೂಡಲೇ ಈಡೇರಿಸಿ ಎಂದು ಕಾರ್ಮಿಕ ಪರಿಷತ್ ಕಾರ್ಯಕರ್ತರು ಮೃತದೇಹವಿದ್ದ ಖಾಸಗಿ ಆಸ್ಪತ್ರೆಯ ಎದುರಿನಲ್ಲಿಯೇ ಪ್ರತಿಭಟನೆ ನಡೆಸಿದರು.ಬಳಿಕ ಮಧ್ಯೆ ಪ್ರವೇಶಿಸಿದ ಪೊಲೀಸರು ಕಂಪೆನಿಯ ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದರು. ಸಮರ್ಪಕ ರಸ್ತೆ ವ್ಯವಸ್ಥೆಯೇ ಇಲ್ಲದೆ ಇಲ್ಲಿಗೆ ಅಂಬ್ಯುಲೆನ್ಸ್ ಬರಲು ಸಾಧ್ಯವಾಗದೆ ಜೀಪೊಂದರಲ್ಲಿ ಗಾಯಾಳುವನ್ನು ಸಾಗಿಸಬೇಕಾಯಿತು.ಕೆಸರಿನ ರಸ್ತೆಯಲ್ಲಿ ವಾಹನ ಸಾಗುವಷ್ಟರಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ವ್ಯಯವಾಯಿತು.ಸಕಾಲಿಕ ಚಿಕಿತ್ಸೆ ದೊರೆಯದೆ ಜಾನ್ಸನ್ ದಾರಿ ಮಧ್ಯೆ ಕೊನೆಯುಸಿರೆಳೆದರೆಂದು ಎಂದು ಕಾರ್ಮಿಕರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English