ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆ

9:16 AM, Tuesday, August 2nd, 2016
Share
1 Star2 Stars3 Stars4 Stars5 Stars
(No Ratings Yet)
Loading...

Aati-Amavasyeಮಂಗಳೂರು: ಆಟಿ ತಿಂಗಳು ಎಂದಾಕ್ಷಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ವಾಡಿಕೆ ಇದೆ. ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ) ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆ ಇದೆ. ಆಟಿ ಕಷಾಯಕ್ಕೂ ಅಗ್ರ ಸ್ಥಾನ ದೊರೆತಿದೆ.

ಕೃಷಿ ಅವಲಂಭಿತ ಪ್ರಾಚೀನ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಯಾವುದೇ ಬೆಳೆಯ ಫಸಲು ಕೊಯ್ಲಿಗೆ ಬರುವುದಿಲ್ಲ. ಈ ತಿಂಗಳಿನಲ್ಲಿ ಬದಲಾಗುವ ಭೂ ವಾತಾವಾರಣ, ನಿರಂತರ ಸುರಿಯುವ ಮಳೆಯನ್ನು ಕಾಣಬಹುದು. ಈ ಕಾರಣದಿಂದಾಗಿ ಈ ಮಾಸದಲ್ಲಿ ಶರೀರದಲ್ಲಿ ಕಂಡು ಬರುವ ರೋಗಗಳು ಮನುಷ್ಯನನ್ನು ನಿತ್ರಾಣ ಮಾಡುತ್ತದೆ. ಮಳೆಗಾಲದಲ್ಲಿ ದೊರಕುವ ಕಚ್ಚಾ ಆಹಾರ ಪದಾರ್ಥಗಳಿಂದ ರೋಗಗಳು ಸಾಮಾನ್ಯ.

ಆಟಿ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ಬೆಳೆದು ಬಂದಿದೆ. ಹಾಲೆ ಮರದ ಕಷಾಯವನ್ನು ಕರಿ ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಆಟಿ ತಿಂಗಳ ಅಮಾವಾಸ್ಯೆಯ ನಸುಕಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸುವ ರೂಢಿ ಇದೆ. ಈ ಕಷಾಯದ ಔಷಧೀಯ ಉಪಯೋಗದಿಂದ ಇದು ಜಾನಪದ ಔಷಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಹಾಳೆ ಮರದ ಎಲೆಯು ಸಾಮಾನ್ಯವಾಗಿ ದಪ್ಪವಾಗಿದ್ದು ಒಂದು ಗೊಂಚಲಿನಲ್ಲಿ 7 ರಿಂದ 9 ಪತ್ರಗಳಿರುತ್ತವೆ. ಎಲೆಗಳ ಅಗಲ ಒಂದರಿಂದ ಎರಡು ಇಂಚು ಇದ್ದು, ಉದ್ದ 6 ರಿಂದ 12ಇಂಚು ಇರುತ್ತದೆ. ಕಡು ಹಸಿರು ವರ್ಣದಿಂದ ಕೂಡಿದ್ದು ಮುರಿದಾಗ ಹಾಲು ಹೊರಸೂಸುತ್ತದೆ.

ಹಾಲೆ ಮರದ ತೊಗಟೆ ಬೂದು ವರ್ಣದಿಂದ ಕೂಡಿದ್ದು, ದೊರಗಾಗಿದ್ದು ಕಲ್ಲಿನಿಂದ ಜಜ್ಜಿ ಹಾಳೆಗಳಂತೆ ತೆಗೆಯಲು ಬರುವುದು. ಈ ಕಷಾಯವನ್ನು ಕುಡಿಯುವುದರಿಂದ ಶೀತ ವಾತಾವಾರಣವನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ ಹುಳ ಬಾಧೆಯಿಂದ ಜೀರ್ಣಾಂಗವ್ಯೂಹವನ್ನು ಶುದ್ಧಗೊಳಿಸುತ್ತದೆ.

2016ರ ಆಗಸ್ಟ್ 2ರಂದು ಆಟಿ ಅಮಾವಾಸ್ಯೆ ಆಚರಿಸಲು ಜನರು ಸಜ್ಜಾಗಿದ್ದಾರೆ. ಸಾಮೂಹಿಕವಾಗಿ ಕಷಾಯ ಸೇವನೆ ನಡೆಯಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English