ಕಾಸರಗೋಡು: ಆಧುನಿಕ ವ್ಯವಸ್ಥೆಗಳು ಸೌಕರ್ಯ ವೃದ್ದಿಗೊಳಿಸುತ್ತಿದ್ದರೂ ಸಾಮೂಹಿಕ ಸಮಸ್ಯೆಗಳು ಸುತ್ತಿಕೊಳ್ಳುತ್ತಿರುವುದು ಜಾಗತಿಕವಾಗಿ ಕಳವಳಕಾರಿಯಾಗಿದೆ.ಈ ಹಿನ್ನೆಲೆಯಲ್ಲಿ ಪ್ರಾಚೀನ ಭಾರತೀಯ ದರ್ಶನ ಎಲ್ಲಾ ಸಮಸ್ಯೆಗಳಿಗೂ ಏಕ ಪರಿಹಾರವಾಗಿ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವುದೆಂದು ಕೇರಳದ ಕೇಂದ್ರ ಸರಕಾರಿ ಮುಖ್ಯ ಅಭಿಯೋಜಕ(ಸೋಲಿಸಿಟರಲ್ ಜನರಲ್)ನಗರೇಶ್ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಸಾಹಿತ್ತಿಕ,ಸಾಂಸ್ಕೃತಿಕ ಸಂಘಟನೆಯಾದ ರಂಗಚಿನ್ನಾರಿ ಶನಿವಾರ ಮುಸ್ಸಂಜೆ ನಗರದ ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ “ಧೀಂತನನ” ನೃತ್ಯ ಗಾಯನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ತನ್ನದೇ ಧರ್ಮ ಸರ್ವಶ್ರೇಷ್ಠವೆಂದು ಭಾರತ ಎಂದೂ ಹೇಳಿಲ್ಲ.ಆದರೆ ಧರ್ಮಕ್ಕಾಗಿ ರಕ್ತಪಾತವಾಗುತ್ತಿರುವುದು ಜಗತ್ತಿನ ಇಂದಿನ ದೊಡ್ಡ ಸವಾಲಾಗಿದ್ದು ಇದರ ಪರಿಹಾರ ಭಾರತೀಯ ಧರ್ಮ,ದರ್ಶನಗಳ ಅರಿವಿನಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
ವಿಶ್ವಸಂಸ್ಥೆ ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದೆ.ಆದರೆ ಪ್ರಾಚೀನ ಭಾರತದ ಸಂಸ್ಕಾರ ಪ್ರಕೃತಿಯೊಂದಿಗಿನ ಸಹ ಬಾಳ್ವೆಯ ಚಿಂತನೆಯಾಗಿದ್ದು ಇದರಿಂದಷ್ಟೆ ಹವಾಮಾನ ವೈಪರೀತ್ಯದಂತಹ ಸವಾಲಿಂದ ಹೊರಬರಲು ಸಾಧ್ಯವಿದೆ.ಆದರೆ ಇಂದಿನ ಭಾರತೀಯ ಯುವ ಸಮುದಾಯ ಪಾಶ್ಚಿಮಾತ್ಯದ ಸೆಳೆತಕ್ಕೊಳಗಾಗುತ್ತಿದ್ದು,ನಮ್ಮ ಕಲೆ,ಸಂಸ್ಕೃತಿಗಳ ಪ್ರೇರಣೆ ಯುವ ಸಮೂಹದ ಮೇಲಾಗಬೇಕೆಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಾಮುದಾಯಿಕ ಚಿಂತನೆಯ ರಂಗ ಚಿನ್ನಾರಿಯಂತಹ ಸಂಘಟನೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಪ್ರೇರಣಾತ್ಮಕವಾಗಿ ಯುವ ಸಮುದಾಯದ ಮೂಲ ಪರಂಪರೆಯ ಆಂತರಂಗಿಕ ಮರುನೋಟಗಳಿಗೆ ಕಾರಣವಾಗುತ್ತದೆಯೆಂದು ಶ್ಲಾಘಿಸಿದರು.
ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಅಡ್ವ.ಎ.ಎನ್ ಅಶೋಕ್ ಕುಮಾರ್,ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್,ನಗರಸಭಾ ಕೌನ್ಸಿಲರ್ ದುಗ್ಗಪ್ಪ,ಹಿರಿಯ ಹಾಯಕ ಪುತ್ತೂರು ನರಸಿಂಹ ನಾಯಕ್ ಉಪಸ್ಥಿತರಿದ್ದು ಶುಭಹಾರೈಸಿದರು.
ಬಳಿಕ ಪುತ್ತೂರು ನರಸಿಂಹ ನಾಯಕ್ ರವರಿಂದ ವೈವಿಧ್ಯಮಯ ಸಂಗೀತ ಸಂಯೋಜನೆಯಲ್ಲಿ ಸುಗಮ ಸಂಗೀತ ಹಾಡುಗಾರಿಕೆ ಪ್ರಸ್ತುತಗೊಂಡಿತು.ಅಂಜಲಿ ಎಸ್ ಮತ್ತು ಸಂದ್ಯಾ ಅತ್ತಾವರರಿಂದ ಮೈನವಿರೇಳಿಸುವ ಕಥಕ್ ನೃತ್ಯ ಗಮನ ಸೆಳೆಯಿತು.
ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ ವಂದಿಸಿದರು.
Click this button or press Ctrl+G to toggle between Kannada and English