ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ಇಲಾಖೆಯ ಸಿಬ್ಬಂದಿಗಳು ಎಸಿಬಿ ಬಲೆಗೆ

9:00 AM, Friday, July 21st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

acbಮಂಗಳೂರು: ಪುತ್ತೂರಿನ ವ್ಯಕ್ತಿಯೊಬ್ಬರು ಹೊಸ ಸಹಕಾರಿ ಸಂಘ ಮಾಡಲು ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅವರಿಂದ ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮತ್ತು ಚಾಲಕನನ್ನು ಎಸಿಬಿ ಬಂಧಿಸಿದೆ.

ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಮಂಜುನಾಥ್ ಮತ್ತು ಚಾಲಕ ರಾಧಾಕೃಷ್ಣ ಎಂಬವರು ಲಂಚ ಸ್ವೀಕಾರ ಮಾಡಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದವರು.

ಪಡ್ನೂರಿನ ವಸಂತ್ ಎಂಬವರು ಹೊಸದಾಗಿ ಸಹಕಾರ ಸಂಘ ಮಾಡುವ ಕುರಿತು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಬಂಧಿತರು ಅದರ ಅನುಮತಿಗಾಗಿ 25ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಸಂತ್ ಮುಂಚಿತವಾಗಿ ಎಸಿಬಿಗೆ ಮಾಹಿತಿ ನೀಡಿದ್ದರು. ಅದರಂತೆ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇನ್ಸ್‌ಪೆಕ್ಟರ್‌ ಯೋಗೀಶ್ ಅನುಮತಿ ಮೇರೆಗೆ ಎಸಿಬಿ ಶೃತಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುಧೀರ್ ಹೆಗ್ಡೆ ಸೂಚನೆಯಂತೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಹರಿಪ್ರಸಾದ್, ರಾಧಾಕೃಷ್ಣ ಎ, ಪ್ರಶಾಂತ್, ರಾಧಾಕೃಷ್ಣ ಕೆ, ವೈಶಾಲಿ ಹಾಗೂ ಚಾಲಕ ಗಣೇಶ್ ಭಾಗವಹಿಸಿದ್ದರು.

ಚಾಲಕ ರಾಧಾಕೃಷ್ಣನ ಮೂಲಕ ಈ ಹಣ ಮಂಜುನಾಥನ ಕೈಸೇರಲಿತ್ತು. ಇದೇ ವೇಳೆ ಮಂಜುನಾಥ ತನ್ನ ರೂಂನಲ್ಲಿ ಬಚ್ಚಿಟ್ಟಿದ್ದ 1.80 ಲಕ್ಷ ನಗದು ಹಣವನ್ನು ಎಸಿಬಿ ವಶಪಡಿಸಿಕೊಂಡಿದೆ. ತನಿಖೆ ನಡೆಯುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English