ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹೊರ ತಂದ ಅಕಾಡಮಿಯ ಮೂರು ವರ್ಷಗಳ ಸಾಧನೆಗಳ ಮಾಹಿತಿಯುಳ್ಳ ‘ಹಕೀಕತ್’ ಹಾಗೂ ಇತರ ಐದು ಬ್ಯಾರಿ ಭಾಷೆಯ ಕೃತಿಗಳನ್ನು ನಗರದ ಹೊಟೇಲ್ ಶ್ರೀನಿವಾಸ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಎ.ಮೊಹಿದಿನ್, ರಾಜ್ಯದಲ್ಲಿರುವ ಅಕಾಡಮಿಗಳು ಆಯಾ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯದ ಬೆಳವಣಿಗೆ, ಪೋಷಣೆಗೆ ಶ್ರಮಿಸಬೇಕು ಅದು ರಾಜಕಾರಣಿಗಳಿಗೆ ಆಶ್ರಯ ತಾಣವಾಗಬಾರದು ಎಂದು ಹೇಳಿದರು.
ಅಕಾಡಮಿಗಳಿಗೆ ನೇಮಕ ಮಾಡುವಾಗ ಸಾಹಿತಿಗಳು, ಕಲಾವಿದರು, ಸಾಹಿತ್ಯಾಸಕ್ತರು, ಸಂಘಟಕರನ್ನು ಪರಿಗಣಿಸಬೇಕು ಎಂದು ಬಿ.ಎ.ಮೊಹಿದಿನ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ತನ್ನ ಮೂರುವರೆ ವರ್ಷದ ಅವಧಿಯಲ್ಲಿ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ರಚನೆ, ಬ್ಯಾರಿ ಸಾಹಿತ್ಯ ಭವನಕ್ಕೆ ಜಮೀನು ಖರೀದಿ, ಬ್ಯಾರಿ ಕ್ಯಾಲೆಂಡರ್ ರಚನೆ, ಬ್ಯಾರಿ ಫೆಲೋಶಿಪ್, ಬ್ಯಾರಿ ಸಾಕ್ಷಚಿತ್ರ, ಬ್ಯಾರಿ ಅಧ್ಯಯನ ಪೀಠಕ್ಕೆ ಪ್ರಯತ್ನ ಇತ್ಯಾದಿ ಸಾರ್ಥಕ ಸೇವೆ ಮಾಡಲು ಸಾಧ್ಯವಾಯಿತು ಎಂದರು.
ಮುಖ್ಯ ಅತಿಥಿಯಾಗಿ ಹಂಪಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ವಿ.ನಾವಡ, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಕೆ.ಮುಹಮ್ಮದ್, ಕಾಟಿಪಳ್ಳ ಮಿಸ್ಬಾಹ್ ಮಹಿಳಾ ಕಾಲೇಜ್ನ ಅಧ್ಯಕ್ಷ ಬಿ.ಎಂ. ಮಮ್ತಾಝ್ ಅಲಿ, ಭಾರತೀಯ ಕೃಷಿಕ ಸಮಾಜದ ದ.ಕ. ಜಿಲ್ಲಾಧ್ಯಕ್ಷ ಹೈದರ್ ಪರ್ತಿಪಾಡಿ, ದುಬೈ ಬ್ಯಾರೀಸ್ ಕಲ್ಚರಲ್ ಫೋರಂನ ಪ್ರಧಾನ ಕಾರ್ಯದರ್ಶಿ ಡಾ. ಮುಹಮ್ಮದ್ ಕಾಪು, ತುಳು ಸಾಹಿತ್ಯ ಅಕಾಡಮಿಯ ನಿಯೋಜಿತ ಅಧ್ಯಕ್ಷ ಎ.ಸಿ.ಭಂಡಾರಿ, ಉಳ್ಳಾಲ ಹಝ್ರತ್ ಬನಾತ್ ವಿಮೆನ್ಸ್ ಕಾಲೇಜ್ನ ಪ್ರಾಂಶುಪಾಲೆ ಝಾಹಿದಾ ಜಲೀಲ್ ಭಾಗವಹಿಸಿ ಶುಭ ಹಾರೈಸಿದರು. ಅಕಾಡಮಿಯ ಸದಸ್ಯರಾದ ಆಯಿಶಾ ಪೆರ್ಲ, ಇದಿನಬ್ಬ ಬ್ಯಾರಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English