ಉಡುಪಿ: ಉಡುಪಿಯಲ್ಲಿ ಭಜರಂಗದಳ, ಬಿಜೆಪಿ, ವಿಹಿಂಪ ಸೇರಿದಂತೆ ಹಲವು ಸಂಘಟನೆಗಳು ನಟ ಪ್ರಕಾಶ್ ರೈ ಅವರಿಗೆ ಕಾರಂತ ಪ್ರಶಸ್ತಿ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ.
ಇಂದು ನಟ ಪ್ರಕಾಶ್ ರೈ ಅವರಿಗೆ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದ್ದು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿದ್ದು, ಕಪ್ಪು ಬಾವುಟ ತೋರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾರ್ಯಕರ್ತರ ಬಂಧನಕ್ಕೆ ಪೊಲೀಸರು ಮುಂದಾಗಿದ್ದು, ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದರು.
ವಿಹಿಂಪ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪ್ರಕಾಶ್ ರೈ ವಿರುದ್ಧ ಧಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಮಾಧಾನವಿದ್ದರೆ ರಾಷ್ಟ್ರಪ್ರಶಸ್ತಿ ವಾಪಾಸ್ ಕೊಡಲು ಒತ್ತಾಯಿಸಿದ ಕಾರ್ಯಕರ್ತರು, ಕಾರಂತ ಪ್ರಶಸ್ತಿ ಸ್ವೀಕರಿಸಬೇಡಿ ಎಂದು ಆಗ್ರಹಿಸಿದರು.
ಇನ್ನೊಂದೆಡೆ ನಾಥಪಂಥ ಅನುಯಾಯಿಗಳು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ನಟ ಪ್ರಕಾಶ್ ರೈ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಮಾತನಾಡಿದ್ದಾರೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಜೋಗಿ ಮಠದ ಸ್ವಾಮೀಜಿ ಯೋಗಿ ಫಿರ್ ಶ್ರೀಶ್ರೀಶ್ರೀ ಜಗದೀಶ್ ನಾಥ್ ಜೀ, ಶ್ರೀಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಮಠದ ಗುರುಗಳು ಸೇರಿದಂತೆ ಹಲವರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English