ಮಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ದಲಿತ ಸಮುದಾಯವನ್ನು `ಬೀದಿ ನಾಯಿಗಳು’ ಎಂದು ಹೀಯಾಳಿಸಿದ್ದು, ಅವರ ದಲಿತ ವಿರೋಧಿ ನೀತಿಯನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಖಂಡಿಸುತ್ತಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ರಜನೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಂಬೇಡ್ಕರ್ ರಚಿತ ಸಂವಿಧಾನವನ್ನು ಮಾರ್ಪಾಡು ಮಾಡಬೇಕೆಂದು ಹೇಳಿ ಭಾರತದ ಸಂವಿಧಾನವನ್ನು ಅಗೌರವಿಸಿದ್ದಾರೆ. ಹೆಗಡೆ ಹೇಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾವುದೇ ಪ್ರತಿಕ್ರಿಯೆ ನೀಡದಿರುವುದು, ಸಚಿವ ಸ್ಥಾನದಿಂದ ಕೈಬಿಡದಿರುವುದನ್ನು ನೋಡಿದರೆ ದಲಿತ ಸಮುದಾಯದ ಬಗ್ಗೆ ಅವರಿಗೂ ಹೆಗಡೆ ಮನೋಭಾವವಿದ್ದಂತೆ ಕಾಣಿಸುತ್ತಿದೆ ಎಂದರು.
ಸಚಿವರು ತಾವು ಆರ್ಎಸ್ಎಸ್ ಕಟ್ಟಾಳು ಎಂದು ಹೇಳಿಕೊಂಡು ಬಂದಿದ್ದಾರೆ. ಆದರೆ ಅವರ ದಲಿತ ವಿರೋಧಿ ಹೇಳಿಕೆಯ ವಿರುದ್ಧ ಆರ್ಎಸ್ಎಸ್ ಮುಖ್ಯಸ್ಥರು ಹಾಗೂ ಇತರ ನಾಯಕರಾಗಲಿ ಕ್ಷಮೆಯಾಚಿಸದಿರುವುದು ಹಾಗೂ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕದಿರುವುದನ್ನು ಗಮನಿಸಿದರೆ ಅನಂತ್ ಹೇಳಿಕೆಗೆ ಇವರ ಬೆಂಬಲವಿದೆ ಎಂಬುವುದನ್ನು ಸೂಚಿಸುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದವರು ದಲಿತರ ಮನೆಗೆ ಭೇಟಿ ಮಾಡಿ ಅವರೊಂದಿಗೆ ಭೋಜನ ಸ್ವೀಕರಿಸಬೇಕೆಂದು ಕರೆಕೊಟ್ಟಿರುವುದು ದಲಿತ ಸಮುದಾಯವನ್ನು ಮೋಸದ ಬಲೆಗೆ ಹಾಕುವ ಸಂಚಾಗಿದೆ. ದಲಿತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English