ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ 10 ಮೀನುಗಾರರ ರಕ್ಷಣೆ

4:27 PM, Tuesday, January 23rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mangaluruಮಂಗಳೂರು: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಕೇರಳದ ಕಣ್ಣೂರಿನ 10 ಮಂದಿ ಮೀನುಗಾರರನ್ನು ಕರಾವಳಿ ತಟ ರಕ್ಷಣಾ ಪಡೆ ಭಾನುವಾರ ತಡರಾತ್ರಿ ರಕ್ಷಿಸಿದೆ. ಅರಬ್ಬಿ ಸಮುದ್ರದಲ್ಲಿ ಮಲ್ಪೆಯ ಪಶ್ಚಿಮಕ್ಕೆ 100 ನಾಟಿಕಲ್ ಮೈಲ್ಸ್ ದೂರದಲ್ಲಿ ಈ ಘಟನೆ ನಡೆದಿದೆ.

ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಯಾಂತ್ರಿಕ ತೊಂದರೆ ಕಾಣಿಸಿಕೊಂಡು ದೋಣಿಯೊಳಕ್ಕೆ ನೀರು ನುಗ್ಗಲಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ದೋಣಿಯಲ್ಲಿದ್ದ 10 ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಈ ಕುರಿತು ಭಾರತೀಯ ತಟ ರಕ್ಷಣಾ ಪಡೆಯ ಮಂಗಳೂರು ಕೇಂದ್ರಕ್ಕೆ ಸಂದೇಶ ರವಾನೆ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ತಟ ರಕ್ಷಣಾ ಪಡೆಯ ಐಸಿಜಿ ಸಮರ್ ಬೋಟ್ ತಕ್ಷಣ ನೆರವಿಗೆ ಧಾವಿಸಿದೆ. 21ರ ತಡ ರಾತ್ರಿ ವೇಳೆಗೆ ತಟ ರಕ್ಷಣಾ ಪಡೆ ಮೀನುಗಾರಿಕಾ ದೋಣಿಯನ್ನು ಪತ್ತೆ ಹಚ್ಚಿ ಯಾಂತ್ರಿಕ ತೊಂದರೆಯನ್ನು ಸರಿಪಡಿಸಿ ದೋಣಿಯೊಳಗಿದ್ದ ನೀರನ್ನು ತೆರವುಗೊಳಿಸಿದೆ.

ಜನವರಿ 22 ರ ಸಂಜೆ ವೇಳೆಗೆ ದೋಣಿ ಹಾಗೂ ಅದರಲ್ಲಿದ್ದ 10 ಮಂದಿ ಮೀನುಗಾರರನ್ನು ರಕ್ಷಿಸಿದ ಕರಾವಳಿ ತಟ ರಕ್ಷಣಾ ಪಡೆ, ಅವರನ್ನು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರ ವಶಕ್ಕೆ ಒಪ್ಪಿಸಿತು. ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸುವಲ್ಲಿ ತಟ ರಕ್ಷಣಾ ಪಡೆ ಯಶಸ್ವಿಯಾಗಿದ್ದು ಶ್ಲಾಘನೆಗೆ ಪಾತ್ರವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English