ಮಂಗಳೂರು: ಪಕೋಡಾ ಮಾರುವಾಕೆಯ ನಿರ್ಲಕ್ಷ್ಯಕ್ಕೆ ಬಿಸಿ ಎಣ್ಣೆ ಬಿದ್ದು ವಿದ್ಯಾರ್ಥಿನಿಯೊಬ್ಬಳ ಕಾಲು ಸಂಪೂರ್ಣ ಸುಟ್ಟುಹೋದ ಘಟನೆ ನಗರದ ಬೆಂದೂರ್ವೆಲ್ ಮಾರುಕಟ್ಟೆಯ ಬಳಿ ನಡೆದಿದೆ.
ಬಿಕರ್ನಕಟ್ಟೆಯ ನಿವಾಸಿ ವಿಕ್ಟರ್ ಡಿಕೋಸ್ತ ಭಾನುವಾರ ತನ್ನ ಪತ್ನಿ ಹಾಗೂ 14 ವರ್ಷದ ಮಗಳು ಅಮೆಂಡಾ ರಿಯಾ ಜೊತೆಗೆ ಬೆಂದೂರ್ವೆಲ್ನಲ್ಲಿ ವಾರದ ತರಕಾರಿಗಳನ್ನು ಕೊಂಡುಕೊಳ್ಳಲು ಬಂದಿದ್ದರು. ಖರೀದಿ ಮುಗಿಸಿ ಇನ್ನೇನು ವಾಹನ ನಿಲುಗಡೆ ಮಾಡಬೇಕಾದ ಜಾಗಕ್ಕೆ ಬರಬೇಕೆನ್ನುವಷ್ಟರಲ್ಲಿ ಬೀದಿ ಬದಿಯಲ್ಲಿ ಪಕೋಡಾ ಮಾರುವ ಧಾರವಾಡ ಮೂಲದ ಮಹಿಳೆಯೊಬ್ಬರು ಬಿರುಸಿನಿಂದ ಬಿಸಿ ಎಣ್ಣೆ ಇರುವ ಬಾಣಲೆಯನ್ನು ಪಕ್ಕಕ್ಕೆ ಸರಿಸುತ್ತಿರುವಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ರಿಯಾಳಿಗೆ ಡಿಕ್ಕಿ ಹೊಡೆದರು. ಪರಿಣಾಮ ಕಾದ ಎಣ್ಣೆ ರಿಯಾಳ ಎರಡೂ ಕಾಲಿಗೆ ಬಿದ್ದು ಸಂಪೂರ್ಣ ಸುಟ್ಟುಹೋಗಿದೆ. ತಕ್ಷಣ ಆಕೆಯನ್ನು ಪಕ್ಕದ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಪಕೋಡಾ ಮಾರುವಾಕೆಯ ವಿರುದ್ಧ ಬಂದರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ರಿಯಾ ಬೆಂದೂರ್ವೆಲ್ ಸೈಂಟ್ ಆಗ್ನೆಸ್ನಲ್ಲಿ ಓದುತ್ತಿದ್ದು, ಇನ್ನೇನು ಶಾಲಾ ಅಂತಿಮ ಪರೀಕ್ಷೆ ಹತ್ತಿರ ಬರುತ್ತಿದೆ. ಗಾಯಗಳನ್ನು ಗಮನಿಸಿದರೆ ತಕ್ಷಣ ಚೇತರಿಸುವುದು ಅನುಮಾನವಿದೆ. ಇದರಿಂದ ಆಕೆಯ ಹೆತ್ತವರೂ ಕಂಗಾಲಾಗಿದ್ದಾರೆ.
ಇನ್ನು ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಮಹಿಳೆ ವ್ಯಾಪಾರ ಮಾಡಲು ಮಂಗಳೂರು ಮಹಾನಗರ ಪಾಲಿಕೆಯಿಂದ ಅನುಮತಿ ಕೂಡಾ ಪಡೆದಿಲ್ಲ. ಮೊದಲೇ ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದರೂ ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯ ವರ್ತನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಟ್ರೇಡ್ ಲೈಸನ್ಸ್ ರದ್ದುಪಡಿಸುವಂತೆ ಒತ್ತಾಯ ಕೂಡಾ ಮಾಡಿದ್ದಾರೆ.
Click this button or press Ctrl+G to toggle between Kannada and English