2ನೇ ಬಾರಿ ಹೆಚ್‌ಡಿಕೆ- ಸುದೀಪ್‌ ಭೇಟಿ… ಗರಿಗೆದರಿದ ಕುತೂಹಲ

4:47 PM, Monday, April 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kiccha-sudeepಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಏರುತ್ತಿರುವ ಬೆನ್ನಲ್ಲೇ ಕನ್ನಡ ಚಿತ್ರರಂಗದ ಬಹುಮುಖ ತಾರೆ ಕಿಚ್ಚ ಸುದೀಪ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರನ್ನ 2ನೇ ಬಾರಿ ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಹೌದು,ಇಂದು ನಟ ಸುದೀಪ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನೆಗೆ ಭೇಟಿ ನೀಡಿದರು. ಉಭಯ ಕುಶಲೋಪರಿ ವಿಚಾರಿಸಿದರು, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗು ನಟ ನಿಖಲ್ ಜೊತೆ ಉಪಹಾರ ಸೇಚಿಸಿದರು. ನಂತರ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಹೆಚ್‌ಡಿಕೆ ಕುಟುಂಬದ ಜೊತೆ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಮೂರು ತಿಂಗಳಿನಲ್ಲಿ ಎರಡನೇ ಬಾರಿ ಕುಮಾರಸ್ವಾಮಿ ಅವರನ್ನು ಸುದೀಪ್ ಭೇಟಿ ಮಾಡುತ್ತಿರುವುದು ವಿಶೇಷ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಈಗಾಗಲೇ ಜೆಡಿಎಸ್ ಪರ ಪ್ರಚಾರ ಮಾಡಲು ನಿರ್ಧರಿಸಿದ್ದು, ಬಹುತೇಕ ರಾಜ್ ಕುಟುಂಬ ಅವರ ಬೆನ್ನಿಗೆ ನಿಲ್ಲಲಿದೆ ಎನ್ನಲಾಗ್ತಿದೆ. ಇದೀಗ ಸುದೀಪ್ ಕೂಡ ಎರಡನೇ ಬಾರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಲಿದ್ದಾರಾ ಎನ್ನುವ ಕುತೂಹಲ ಕೆರಳುವಂತೆ ಮಾಡಿದೆ.

ಇನ್ನು ಚುನಾವಣಾ ಮುನ್ನ ತೆಲುಗು ಪವರ್ ಸ್ಟಾರ್ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಕೆಲಕಾಲ ಮಾತುಕತೆ ನಡೆಸಿದ್ದರು. ಈ ವೇಳೆ ತೆಲುಗು ಭಾಷಿಕರು ಹೆಚ್ಚಿರುವ ಕಡೆ ಚುನಾವಣಾ ಪ್ರಚಾರಕ್ಕೆ ಪವನ್ ಕಲ್ಯಾಣ್ ಬರಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.

ಇದೀಗ ಇಂದು ಸುದೀಪ್ ಕೂಡ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಕಾರಣ ಜೆಡಿಎಸ್‌ಗೆ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ತಾರಾ ಮೆರುಗು ಬರುವ ಸಾಧ್ಯತೆ ಇದೆ. ರಾಜ್ ಕುಟುಂಬ, ಪವನ್ ಕಲ್ಯಾಣ್ ಬಳಿಕ ಇದೀಗ ಕಿಚ್ಚ ಸುದೀಪ್‌ ಜೆಡಿಎಸ್ ಸ್ಟಾರ್ ಕ್ಯಾಂಪೇನಾರ್ ಆಗ್ತಾರಾ ಎನ್ನುವ ಕುತೂಹಲ ಹೆಚ್ಚಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English