ಪಿಲಿಕುಳ ನಿಸರ್ಗ ಧಾಮದಲ್ಲಿ ‘ಬಿಸು ಪರ್ಬ’ ಆಚರಣೆ

9:16 PM, Saturday, April 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

Pilikula ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗ ಧಾಮದ ಗುತ್ತು ಮನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ‘ಬಿಸು ಪರ್ಬ’ ಆಚರಿಸಲಾಯಿತು.

ದಕ್ಷಿಣ ಕನ್ನಡ ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ತುಳುವರು ಹೊಸ ವರ್ಷದ ಮೊದಲ ದಿನವನ್ನಾಗಿ ‘ಬಿಸು ಪರ್ಬ’ ಆಚರಿಸುತ್ತಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಈ ಕೃಷಿ ಪ್ರೇರಿತ ಹೊಸ ವರ್ಷಾಚರಣೆಯನ್ನು ವಿವಿಧ ರೀತಿಗಳಲ್ಲಿ ಆಚರಿಸಲಾಗುತ್ತದೆ. ತುಳುನಾಡಿನ ಬಿಸು ಪರ್ಬ ಆಚರಣೆಯಲ್ಲಿ ಇಲ್ಲಿ ಬೆಳೆಯಲಾಗುವ ಎಲ್ಲಾ ರೀತಿಯ ತರಕಾರಿ, ಫಲ ವಸ್ತುಗಳನ್ನು ಇಟ್ಟು ಪೂಜೆ ಮಾಡಿಕೊಂಡು ಮಧ್ಯಾಹ್ನ ವಿಶೇಷ ಅಡುಗೆಯೂಟ ಮಾಡಲಾಗುತ್ತದೆ. ಕುಟುಂಬವು ತನ್ನ ಯಜಮಾನನ್ನು ಗೌರವಿಸುವ, ಆಶೀರ್ವಾದ ಹಾಗೂ ಉಡುಗೊರೆ ಪಡೆಯುವ ದಿನವಾಗಿ ಬಿಸು ಪರ್ಬವನ್ನು ಆಚರಿಸಲಾಗುತ್ತದೆ.

ಪಿಲಿಕುಳದ ಗುತ್ತಿನ ಮನೆಯಲ್ಲಿ ಹಣ್ಣು-ತರಕಾರಿಗಳ ಬಿಸು ಕಣಿಯೊಂದಿಗೆ ಬಿಸು ಪರ್ಬ ಆಚರಣೆಗೆ ಚಾಲನೆ ನೀಡಲಾಗಿತ್ತು. ಗುತ್ತು ಮನೆಯ ಚಾವಡಿಯಲ್ಲಿ ಆಗಮಿಸಿದವರಿಗೆಲ್ಲಾ ಬೆಲ್ಲ-ನೀರಿನ ಸ್ವಾಗತವಿತ್ತು. ಚಾವಡಿಯ ಇನ್ನೊಂದು ಮಗ್ಗುಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ತುಳುನಾಡ ಬಲಿಯೇಂದ್ರ ತಾಳಮದ್ದಳೆ ನಡೆಯಿತು. ಬಳಿಕ ಗಾಯನ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗುತ್ತು ಮನೆಯ ಹೊರ ಆವರಣದಲ್ಲಿ ಬಿಸಿಲ ಉರಿ ಮೈ ಸುಡುತ್ತಿದ್ದರೆ, ಗುತ್ತು ಮನೆಯ ಚಾವಡಿಯಲ್ಲಿ ತಂಪಿನ ವಾತಾವರಣ ಇತ್ತು. ವಿಶೇಷ ಮರ ಹಾಗೂ ಹಳೆಯ ಗುತ್ತುಮನೆಯ ಶೈಲಿಯಲ್ಲಿ ನಿರ್ಮಿಸಲಾದ ವಿಶಾಲವಾದ ಗುತ್ತು ಮನೆ ತುಳುನಾಡಿನ ಭವ್ಯ ಪರಂಪರೆಗೆ ಸಾಕ್ಷಿಯಾಗಿತ್ತು. ಗುತ್ತುಮನೆಯ ವಿನ್ಯಾಸ ಹಾಗೂ ಪೂರಕ ಕಟ್ಟಡ ಸಾಮಗ್ರಿಗಳ ಬಳಕೆಯಿಂದ ಪ್ರವಾಸಿಗರಿಗೆ ಹೊರಗಿನ ಬಿಸಿ ವಾತಾರವಣದಲ್ಲೂ ತಂಪಿನ ಅನುಭವ ನೀಡಿತು‌.

ಹೀಗೆ ತುಳುನಾಡಿನ ರೈತರ ಬದುಕು ಮತ್ತು ನೆಲದ ಸಂಬಂಧವನ್ನು ಪ್ರತಿಬಿಂಬಿಸುವ ಕೃಷಿ ಪ್ರೇರಿತ ಬದುಕಿನ ಆಚರಣೆ ‘ಬಿಸು ಪರ್ಬ’ವನ್ನ ಸಂಭ್ರಮದಿಂದ ಆಚರಿಸಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English