ಮಂಗಳೂರು: ಭಾನುವಾರ ರಾತ್ರಿ ಸುರಿದ ಭಾರಿ ಮಳೆಯ ವೇಳೆ ಮಂಗಳೂರಿನ ದೇರೇಬೈಲ್ ಸಮೀಪದ ಬೋರುಗುಡ್ಡೆ ಎಂಬಲ್ಲಿ ಸಿಡಿಲು ಬಡಿದು ಎರಡೂವರೆ ವರ್ಷದ ಮಗುವೊಂದು ಸಾವನ್ನಪ್ಪಿದೆ.
ಮೂಲತಃ ಉತ್ತರ ಕರ್ನಾಟಕದವರಾದ ಮಗವಿನ ಅಪ್ಪ -ಅಮ್ಮ ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಹನುಮಂತ ಕೆ. ಎಂಬುವರ ಎರಡೂವರೆ ವರ್ಷದ ಗಂಡು ಮಗು ಮುತ್ತು ಸಿಡಿಲಿಗೆ ಬಲಿಯಾಗಿದೆ. ಬೋರುಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹನುಮಂತ ಕುಟುಂಬ ಇದೀಗ ಮಗುವನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದೆ.
ಭಾನುವಾರ ರಾತ್ರಿ ಸುಮಾರು 7.30ರ ಸುಮಾರಿಗೆ ಭಾರಿ ಗುಡುಗು- ಸಿಡಿಲು ಆರಂಭವಾದಾಗ ಮನೆಯೊಳಗೆ ಆಟವಾಡುತ್ತಿದ್ದ ಮಗು ಮನೆಯವರ ಕಣ್ತಪ್ಪಿಸಿ ಹೊರಗೆ ಬಂದಿತ್ತು ಎನ್ನಲಾಗಿದೆ. ಇದೇ ವೇಳೆ ಸಿಡಿಲು ಕಾಣಿಸಿಕೊಂಡು ಮಗುವನ್ನು ಬಲಿಪಡೆದಿದೆ.
ಮನೆಯ ಪಕ್ಕದಲ್ಲೇ ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಸಿಡಿಲು ಅಪ್ಪಳಿಸಿದ ರಭಸಕ್ಕೆ ವಿದ್ಯುತ್ ಆಘಾತಕ್ಕೆ ಒಳಗಾಗಿ ಮಗು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English