ಮಂಗಳೂರು: 2014ರಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ಬಜಾಲ್ ಜಲ್ಲಿಗುಡ್ಡೆ ಜಯರಾಜ್ ಎಂಬುವರನ್ನು ಕೊಲೆ ಮಾಡಿದ್ದ ಅಪರಾಧಿಗೆ ಸೆಷನ್ಸ್ ನ್ಯಾಯಾಲಯವು ಎಂಟು ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತೇವರತೆಪ್ಪ ನಿವಾಸಿ ಮಾಲ್ತೇಶ್ ಅಲಿಯಾಸ್ ಟಿಕ್ಕಿ ಮೋಹನನಿಗೆ ಮಂಗಳೂರಿನ ಆರನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಎಂಟು ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ಬಸ್ ಕಂಡಕ್ಟರ್ ಆಗಿದ್ದ ಮಾಲತೇಶ್ ಮತ್ತು ಕೂಲಿ ಕಾರ್ಮಿಕನಾಗಿದ್ದ ಜಯರಾಜ್ ಸ್ನೇಹಿತರಾಗಿದ್ದರು. ಜೊತೆಯಾಗಿ ಪಿಕ್ ಪಾಕೆಟ್, ಗಾಂಜಾ ಮತ್ತು ಮದ್ಯಪಾನ ಮಾಡುತ್ತಿದ್ದರು. 2014 ಅ. 1 ರಂದು ರಾತ್ರಿ ಇವರು ರೈಲು ನಿಲ್ದಾಣದಲ್ಲಿ ಜಗಳವಾಡಿದ್ದು, ಮಾಲ್ತೇಶ್ ಚೂರಿಯಿಂದ ಜಯರಾಜ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ.
ಕೊಲೆ ಮಾಡಿದ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದರು. 20 ದಿನಗಳ ಬಳಿಕ ಆರೋಪಿ ಮಾಲ್ತೇಶ್ ನನ್ನು ಬಂಧಿಸಿದ್ದರು. ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ತಾರನಾಥ ಅವರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆಯನ್ನು ಕೈಗೆತ್ತಿಕೊಂಡ ಆರನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಟಿ ರಂಗಸ್ವಾಮಿ ಅವರು, ಕೆಲವು ಸಂಶಯಗಳ ಹಿನ್ನೆಲೆಯಲ್ಲಿ ಇದೊಂದು ಮಾನವ ಹತ್ಯೆ ಎಂದು ಈ ತೀರ್ಪು ನೀಡಿದ್ದು, ದಂಡ ತೆರಲು ತಪ್ಪಿದರೆ ಮತ್ತೆ ಎರಡು ತಿಂಗಳು ಸಜೆಯನ್ನು ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.
Click this button or press Ctrl+G to toggle between Kannada and English