ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ ಪರ್ಯಂತ ನಡೆಯುತ್ತಿದ್ದ ಜಾತ್ರಾ ಮಹೋತ್ಸವ ಮಂಗಳವಾರ ರಾತ್ರಿ ವೈಭವದ ಬ್ರಹ್ಮರಥೋತ್ಸವ ಮತ್ತು `ಪುತ್ತೂರು ಬೆಡಿ` (ಸಿಡಿಮದ್ದು ಪ್ರದರ್ಶನ)ಯೊಂದಿಗೆ ಸಮಾಪನಗೊಂಡಿತು.
ರಾತ್ರಿ 9.30 ವೇಳೆಗೆ ಮಹಾಲಿಂಗೇಶ್ವರ ದೇವರ ರಥಾರೋಹಣ ಆರಂಭವಾಯಿತು, ದೇವರು ರಥಾರೂಢರಾದ ಬಳಿಕ ದೇವಾಲಯದ ಎದುರಿನ ಬೆಡಿ ಗದ್ದೆಯಲ್ಲಿ ಸುಮಾರು ಒಂದು ಗಂಟೆ ಕಾಲ ಬೆಡಿ ಪ್ರದರ್ಶನ ನಡೆಯಿತು. ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ವಿವಿಧ ರೀತಿಯ ಚಿತ್ತಾಕರ್ಷಕ ಸಿಡಿಮದ್ದು ಪ್ರದರ್ಶನ ಭಕ್ತ ಸಮೂಹದ ಕಣ್ಮನ ಸೆಳೆಯಿತು. ಬಳಿಕ ವೈಭವದ ಬ್ರಹ್ಮರೋತ್ಸವ ನಡೆಯಿತು.
ಪುತ್ತೂರು ಸೀಮೆಯ ಜನತೆ ಸೇರಿ ಜಿಲ್ಲೆ, ಹೊರಜಿಲ್ಲೆ ಮತ್ತು ಹೊರ ರಾಜ್ಯದ ಲಕ್ಷಾಂತರ ಮಂದಿ ಭಕ್ತರು ಬ್ರಹ್ಮರಥೋತ್ಸವ, ಪುತ್ತೂರು ಬೆಡಿ ವೀಕ್ಷಿಸಿದರು.
ಲಕ್ಷಾಂತರ ಜನ ಸೇರಿದ ಜಾತ್ರಾ ಗದ್ದೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪುತ್ತೂರು ಪೇಟೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗದಂತೆ ಪೊಲೀಸರು ಎಚ್ಚರ ವಹಿಸಿದರು.
Click this button or press Ctrl+G to toggle between Kannada and English