ಮಂಗಳೂರು : ಹಂಪನಕಟ್ಟೆ ಐಡಿಯಲ್ ಐಸ್ ಕ್ರೀಮ್ ಬಳಿ ಇರುವ ಅಶ್ವತ್ಥ ಮರದಿಂದ ಭಾರೀ ಗಾತ್ರದ ರೆಂಬೆ ಬಸ್ಸಿನ ಮೇಲೆ ತುಂಡಾಗಿ ಬಿದ್ದ ಘಟನೆ ಸೋಮವಾರ ಮಂಗಳೂರಿನಲ್ಲಿ ನಡೆದಿದೆ.
ನಗರದ ಜನನಿಬಿಡ ಹಂಪನಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಪ್ರತಿದಿನ ನೂರಾರು ಮಂದಿ ಬಸ್ಸಿಗಾಗಿ ಕಾಯುವ ಜಾಗ, ನಗರದ ಜನನಿಬಿಡ ಹಂಪನಕಟ್ಟೆಯಲ್ಲಿ ಘಟನೆ ನಡೆದಿದ್ದು, ಅಲ್ಲೇ ಇದ್ದ ಅಶ್ವತ್ಥ ಮರದಿಂದ ಭಾರೀ ಗಾತ್ರದ ರೆಂಬೆ ಏಕಾಏಕಿ ಮುರಿದು ಬಿದ್ದಿದೆ. ಮಂಗಳೂರಿನಿಂದ ಕಿನ್ನಿಗೋಳಿ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸು ಬಂದು ನಿಂತಾಕ್ಷಣ ಮರದ ರೆಂಬೆ ಕಡಿದು ಬಿದ್ದಿದೆ.
ಬಸ್ಸಿನ ಮೇಲೆ ಮರದ ರೆಂಬೆ ಉರುಳಿದ ಪರಿಣಾಮ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದ ಜನರ ಮೇಲೆ ರೆಂಬೆ ಬಿದ್ದಿಲ್ಲ. ಮರದ ರೆಂಬೆ ಮುರಿದು ಬೀಳುವ ಸಂದರ್ಭದಲ್ಲಿ ಬಸ್ ಇಲ್ಲದಿದ್ದರೆ ರೆಂಬೆ ಇಲ್ಲಿದ್ದ ಜನರ ಮೇಲೆ ಉರುಳಿಬಿದ್ದು, ಭಾರೀ ಅನಾಹುತ ಸಂಭವಿಸುತ್ತಿತ್ತು.
ಆದರೂ ಘಟನೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯೋರ್ವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ತೆರಳಿ ಮರದ ರೆಂಬೆಯನ್ನು ತೆರವು ಗೊಳಿಸಿದ್ದಾರೆ.
Click this button or press Ctrl+G to toggle between Kannada and English