ಬೆಂಗಳೂರು : ಅಹಮದಾಬಾದ್ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಗೋಏರ್ ವಿಮಾನಕ್ಕೆ ಹಕ್ಕಿಯ ರೆಕ್ಕೆ ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ವಿಮಾನ ಟೇಕಾಫ್ ಆಗುವ ವೇಳೆ ಈ ಘಟನೆ ನಡೆದಿದ್ದರಿಂದ ತಕ್ಷಣ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಲಾಗಿದೆ. ಹೀಗಾಗಿ, ಯಾವುದೇ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಗೆ ತೊಂದರೆಯಾಗಿಲ್ಲ.
ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಅಹಮದಾಬಾದ್- ಬೆಂಗಳೂರು ಮಾರ್ಗದ ಗೋಏರ್ ವಿಮಾನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗಲು ಸಿದ್ಧತೆ ನಡೆಸುತ್ತಿದ್ದಂತೆ ಹಕ್ಕಿಯ ರೆಕ್ಕೆ ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಗೋಏರ್ ವಿಮಾನದ ವಕ್ತಾರರು, ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಟೇಕಾಫ್ ಆಗಲು ವಿಮಾನ ರನ್ವೇಯಲ್ಲಿ ಸಾಗುತ್ತಿರುವಾಗಲೇ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ಕೂಡಲೆ ವಿಮಾನದ ಇಂಜಿನ್ ಆಫ್ ಮಾಡಿ, ತುರ್ತು ನಿರ್ಗಮನ ದ್ವಾರದ ಮೂಲಕ ಪ್ರಯಾಣಿಕರನ್ನು ಹೊರಗೆ ಕಳುಹಿಸಲಾಗಿದೆ. ಈ ವಿಮಾನದಲ್ಲಿ ಎಷ್ಟು ಮಂದಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಗೋಏರ್ ಇಂದು ನಡೆದ ಅವಘಡಕ್ಕೆ ಕ್ಷಮಾಪಣೆ ಕೋರಿದೆ. ‘ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಪ್ರಯಾಣಿಕರಿಗೆ ತೊಂದರೆಯಾಗಿದೆ. ಇದಕ್ಕಾಗಿ ನಾವು ಕ್ಷಮೆ ಕೋರುತ್ತೇವೆ. ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಪ್ರಯಾಣಿಕರಿಗೆ ಆದ ಅನಾನುಕೂಲಕ್ಕೆ ಕ್ಷಮೆ ಕೋರುತ್ತೇವೆ. ಬೆಳಗ್ಗಿನ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಮಧ್ಯಾಹ್ನ 1.30ರ ವಿಮಾನದಲ್ಲಿ ಅಹಮದಾಬಾದ್ನಿಂದ ಬೆಂಗಳೂರಿಗೆ ಕರೆದೊಯ್ಯಲಾಗುವುದು’ ಎಂದು ಗೋಏರ್ ಸಂಸ್ಥೆ ಪ್ರಕಟಣೆ ಹೊರಡಿಸಿದೆ.
Click this button or press Ctrl+G to toggle between Kannada and English