ಮಂಗಳೂರು : ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳದ ಅಡ್ಡೂರಿನ ಯುವಕನೋರ್ವನ ಮೃತದೇಹವು ಎರಡು ವಾರಗಳ ಬಳಿಕ ಜೂನ್ 21ರಂದು ತವರೂರಿಗೆ ತಲುಪಿದೆ.
ಮೃತಪಟ್ಟ ಯುವಕನನ್ನು ಅಡ್ಡೂರಿನ ದಿ.ನಾರಾಯಣ ಹಾಗೂ ಲಲಿತಾ ದಂಪತಿಯ ಪುತ್ರ ಯಶವಂತ ಪೂಜಾರಿ ಎನ್ನಲಾಗಿದೆ. ಯಶವಂತ ಅವರು ಅಪಘಾದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರಿಗೆ ಮಾಹಿತಿ ಬಂದಿತ್ತು. ಅವರ ಪಾಸ್ಪೋರ್ಟ್, ವೀಸಾದ ಅವಧಿ ಮುಗಿದಿದ್ದು ಮೃತ ದೇಹವನ್ನು ಕಳುಹಿಸಿ ಕೊಡುವುದು ಅಡಚಣೆಯಾಗಿತ್ತು. ನಂತರ ಅನಿವಾಸಿ ಕನ್ನಡಿಗ, ಉದ್ಯಮಿ ಅಡ್ಡೂರಿನ ಹಿದಾಯತ್ ಅವರ ಸಹಕಾರ ದಿಂದ ಮೃತ ದೇಹ ಕುಟುಂಬಿಕರಿಗೆ ತಲುಪಿದೆ ಎನ್ನಲಾಗಿದೆ.
ಮೃತದೇಹವನ್ನು ಶನಿವಾರ ಪೂರ್ವಾಹ್ನ 11.30ಕ್ಕೆ ವಿಮಾನದಲ್ಲಿ ಕಳುಹಿಸಿಕೊಡಲಾಗಿದ್ದು, ಭಾನುವಾರ ಬೆಳಿಗ್ಗೆ ಮೃತದೇಹವು ಅಡ್ಡೂರಿನ ಪುಣಿಕೋಡಿಗೆ ತಲುಪಿದೆ ಎಂದು ತಿಳಿದುಬಂದಿದೆ.
ಯಶವಂತ ಅವರು ಮೂರು ವರ್ಷಗಳ ಹಿಂದೆ ಅಬುಧಾಬಿಗೆ ಉದ್ಯೋಗಕ್ಕೆ ತೆರಳಿದ್ದರು. ಇವರು ಜೂನ್ 5ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯ ನಿವಾಸಿ ಆಸಿಫ್ ಸೂರಲ್ಪಾಡಿ ಅವರು ಅಡ್ಡೂರಿನ ಹಿದಾಯತ್ ಅವರಿಗೆ ಈ ವಿಚಾರದ ಬಗ್ಗೆ ತಿಳಿಸಿ ನೆರವು ಕೋರಿದ್ದು, ತಕ್ಷಣವೇ ಹಿದಾಯತ್ ಹಾಗೂ ತಂಡ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಯಶವಂತ ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ತಿಳಿದಿರದ ಕಾರಣ ವ್ಯಾಟ್ಸಾಪ್ ಗ್ರೂಪ್ ಒಂದನ್ನು ಮಾಡಿದ್ದು, ಯಶವಂತ ಅವರು ಎಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನುವುದನ್ನು ಪತ್ತೆ ಹಚ್ಚಿದ್ದರು. ಯಶವಂತ ಪೂಜಾರಿ ಅವರ ಪಾಸ್ಪೋರ್ಟ್, ವೀಸಾದ ಅವಧಿ ಮುಗಿದಿದ್ದು, ಸುಮಾರು 45 ದಾಖಲೆಗಳನ್ನು ಸಿದ್ದ ಮಾಡಬೇಕಿತ್ತು. ಈ ನಡುವೆ ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಿದ್ದರು. ಅಲ್ಲದೇ ಮರಣೋತ್ತರ ಪರೀಕ್ಷೆ ಹಾಗೂ ಕೊರೊನಾ ಪರೀಕ್ಷೆ, ಮಾಡಿದ್ದು ವರದಿಯಲ್ಲಿ ನೆಗೆಟಿವ್ ಬಂದಿತ್ತು.
Click this button or press Ctrl+G to toggle between Kannada and English