‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರೂಪಿಸಲು ಆಗ್ರಹ

11:08 PM, Saturday, December 26th, 2020
Share
1 Star2 Stars3 Stars4 Stars5 Stars
(No Ratings Yet)
Loading...

HJJ ಮಂಗಳೂರು  : ಪ್ರೇಮದ ಹೆಸರಿನಲ್ಲಿ ಮುಸ್ಲಿಂಮೇತರ ಮಹಿಳೆಯರನ್ನು ಮತಾಂತರಿಸಿ ಚಿತ್ರಹಿಂಸೆ ನೀಡುವ ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರೂಪಿಸ ಬೇಕೆಂದು ಬಂಟ್ವಾಳ ತಾಲೂಕಿನ ತಹಶೀಲ್ದಾರರಾದ ಕು.ಅನಿತಾ ಲಕ್ಷ್ಮೀ ಇವರಿಗೆ ಮನವಿಯನ್ನು ನೀಡಲಾಯಿತು.

ಇತ್ತಿಚಿಗೆ ಮುಸ್ಲಿಂಮೇತರ ಮಹಿಳೆಯರೊಂದಿಗೆ ಪ್ರೀತಿಯ ನಾಟಕವಾಡಿ, ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ, ಮೋಸದಿಂದ ಮದುವೆ ಮಾಡಿ, ತದನಂತರ ಅವರನ್ನು ಬೀದಿ ಪಾಲು ಮಾಡುವ ಅನೇಕ ಘಟನೆಗಳು ಅನೇಕ ರಾಜ್ಯಗಳು ಸೇರಿ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಈಗಾಗಲೇ ಇಂತಹ ಲವ್ ಜಿಹಾದ್ ಮತಾಂತರವನ್ನು ಕಾನೂನುಬದ್ದವಾಗಿ ತಡೆಯಲು ಉತ್ತರ ಪ್ರದೇಶದಲ್ಲಿ ಪ್ರತ್ಯೇಕ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಪ್ರಕರಣಗಳನ್ನು ಭೇದಿಸಿದಾಗ ಇದರ ಹಿಂದೆ ಕೆಲವು ಮೂಲಭೂತವಾದಿ ಸಂಘಟನೆಗಳು ಕೆಲಸ ಮಾಡುತ್ತಿರುವುದು ಅತ್ಯಂತ ಆಘಾತಕಾರಿಯಾದ ಅಂಶವಾಗಿದೆ. ಮುಸ್ಲಿಂ ಸಂಗಾತಿಯನ್ನು ಮದುವೆಯಾಗಲು ಹಿಂದೂ, ಸಿಕ್ಖ್ ಹಾಗೂ ಕ್ರಿಶ್ಚಿಯನ್ ಧರ್ಮದ ಯುವತಿಯರು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ಸಾಕಷ್ಟು ಪ್ರಕರಣಗಳು ಘಟಿಸುತ್ತಿದೆ. ಈ ಷಡ್ಯಂತ್ರಕ್ಕೆ ದೇಶದ ಅನೇಕ ಪ್ರತಿಷ್ಠಿತ ಮಹಿಳೆಯರು ಬಲಿಯಾಗಿರುವುದು ಗಮನಕ್ಕೆ ಬರುತ್ತಿದೆ. ಕರ್ನಾಟಕದಲ್ಲಿ ಸಹ ಇಂತಹ ಅನೇಕ ಘಟನೆಗಳು ನಡೆಯುತ್ತಿದೆ.

ಇತ್ತಿಚಿಗೆ ಬೆಂಗಳೂರಿನ ಹಿಂದೂ ಮಹಿಳೆ ಶಾಂತಿ ಜೂಬಿ ಎನ್ನುವವರು ದಕ್ಷಿಣ ಕನ್ನಡ ಜಿಲ್ಲೆಯ ಇಬ್ರಾಹಿಂ ಖಲೀಲ್ ಎಂಬುವನ ಜೊತೆಗೆ ಮದುವೆಯಾಗಿ ಆಸಿಯಾ ಎಂದು ಮತಾಂತರವಾದಳು. ತದನಂತರ ಆಸಿಯಾಳು ಬೆಂಗಳೂರಿನ ಕೊಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ, ೨೫ ಲಕ್ಷ ನಗದು, ತವರಿನ ಎಲ್ಲ ಆಸ್ತಿಯನ್ನು ಅವಳು ಇಬ್ರಾಹಿಂ ಖಲೀಲ್‌ಗೆ ನೀಡಿದಳು. ಈಗ ಪತಿ ಪರಾರಿಯಾಗಿದ್ದು, ಮನೆಯಿಂದ ಈಕೆಯನ್ನು ಹೊರ ಹಾಕಲಾಗಿದೆ. ಈಗ ಆಸಿಯಾ ತನಗೆ ನ್ಯಾಯ ನೀಡಿ ಎಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾಳೆ.

ಈ ರೀತಿಯ ಅನೇಕ ಘಟನೆಗಳು ಭಾರತದಾದ್ಯಂತ ನಡೆಯುತ್ತಿವೆ. ಮತಾಂತರದ ನಂತರ ಮದುವೆಯಾದ ಸಾವಿರಾರು ಮುಸಲ್ಮಾನೇತರ ಮಹಿಳೆಯರ ಬದುಕು ಅತ್ಯಂತ ಭಯಾನಕವಾಗುತ್ತಿದೆ. ಅನೇಕ ಕಡೆಗಳಲ್ಲಿ ಪ್ರೀತಿಯ ನಾಟಕ ಮಾಡಿ ಅವರ ಜೊತೆಗೆ ದೈಹಿಕ ಸಂಬಂದ ಬೆಳೆಸಿ, ಅವರ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದು, ತದನಂತರ ಮಹಿಳೆಯರನ್ನು ಮತಾಂತರ ಮಾಡಲು ಬ್ಲ್ಯಾಕ್ ಮೇಲ್ ಮಾಡಲಾಗುತ್ತದೆ. ಇನ್ನೂ ಕೆಲವು ಕಡೆ ಮದುವೆ ನಂತರ ಅವರ ಮೇಲೆ ಶಾರೀರಿಕ ಹಲ್ಲೆ ಮಾಡಿ, ಅವರಿಗೆ ಜೀವನಾಂಶವನ್ನು ನೀಡದೇ ಮನೆಯಿಂದ ಹೊರ ಹಾಕಲಾಗುತ್ತದೆ. ಅಷ್ಟೇಅಲ್ಲದೇ ಕೆಲವೆಡೆ ಮದುವೆಯಾದ ಮಹಿಳೆಯರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಸಹ ಬಳಸಲಾಗುತ್ತಿದೆ.

ಈ ರೀತಿ ಪ್ರೇಮದ ಹೆಸರಿನಲ್ಲಿ ಮದುವೆಯಾಗಿ ಮತಾಂತರವಾದ ಮಹಿಳೆಯರು ಹಿಂದೂ ವಿವಾಹ ಕಾಯಿದೆಯ ಅಡಿಯಲ್ಲಿ ನೋಂದಣಿಯಾಗದ ಕಾರಣ ಅವರಿಗೆ ಜೀವನಾಂಶ ಸಹ ಸಿಗಲಾರದು. ಒಟ್ಟಾರೆ ಇದು ಮಹಿಳೆಯರ ಜೀವನವನ್ನು ಹಾಳು ಮಾಡುವ, ಅವರಿಗೆ ಅವರ ಹಕ್ಕಿನಿಂದ ವಂಚಿತಗೊಳಿಸುವ, ಸಂವಿಧಾನದ ಅಂತರರ್ಜಾತಿ ಕಾಯಿದೆಯ ವಿರುದ್ಧವಾದ ಸಾಮಾಜಿಕ ಪಿಡುಗನ್ನು ದೂರ ಮಾಡಲು ಪ್ರತ್ಯೇಕ ಕಾಯಿದೆಯನ್ನು ಜಾರಿಗೆ ತರುವುದು ಅತ್ಯಂತ ಅವಶ್ಯವಿದೆ. ಅಲಾಹಾಬಾದ್ ಹೈಕೋರ್ಟ್ ಸಹ ತನ್ನ ಆದೇಶದಲ್ಲಿ ಕೇವಲ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮತಾಂತರವನ್ನು ಒಪ್ಪಲಾಗದು ಎಂದು ನೂರ್ ಜಹಾನ್ ಬೇಗಂ ಊರ್ಫ್ ಅಂಜಲಿ ಮಿಶ್ರಾ ವಿರುದ್ಧದ ಉತ್ತರ ಪ್ರದೇಶ ಸರ್ಕಾರ ಪ್ರಕರಣಗಳಲ್ಲಿ ತುಂಬಾ ಸ್ಪಷ್ಟವಾಗಿ ಹೇಳಿದೆ.

ಹಿಂದೂ ಕಾನೂನುಗಳ ಮದುವೆಯ ಪರಿಕಲ್ಪನೆಯು ಮುಸ್ಲಿಂ ವೈಯಕ್ತಿಕ ಕಾಯ್ದೆಯ ಮದುವೆಯ ಪರಿಕಲ್ಪನೆಗಿಂತ ಸಂಪೂರ್ಣ ಭಿನ್ನವಾಗಿದ್ದು, ಮುಸ್ಲಿಂ ವೈಯಕ್ತಿಕ ಕಾಯ್ದೆಯು ‘ನಿಕಾಹ’ವನ್ನು ಒಪ್ಪಂದವೆಂಬಂತೆ ನೋಡಿದರೆ, ಹಿಂದೂ ಕಾಯ್ದೆಯು ಮದುವೆಯನ್ನು ಪವಿತ್ರ ಸಂಸ್ಕಾರ ಎಂದು ಪರಿಗಣಿಸುತ್ತದೆ.
ಮುಸ್ಲಿಂ ಕಾನೂನು ಇಬ್ಬರು ಮುಸ್ಲಿಮರ ಮಧ್ಯೆ ನಡೆಯುವ ಮದುವೆಯನ್ನು ಮಾತ್ರ ಅನುಮೋದಿಸುತ್ತದೆ. ಹೀಗಾಗಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ಇನ್ನೊಬ್ಬ ವ್ಯಕ್ತಿ ಮುಸ್ಲಿಂ ಆಗಿ ಮತಾಂತರಗೊಳ್ಳುವುದು ಕಡ್ಡಾಯವಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಅಂತರಧರ್ಮೀಯ ಮದುವೆಯನ್ನು ಒಪ್ಪುವುದಿಲ್ಲ. ಇನ್ನು ಮತಾಂತರಗೊಂಡ ವಧುವಿಗೆ ಅದುವರೆಗೆ ಹಿಂದೂ ಅಥವಾ ಕ್ರಿಶ್ಚಿಯನ್ ಧರ್ಮದ ಕಾಯ್ದೆಗಳಿಂದ ಸಿಗುತ್ತಿದ್ದ ರಕ್ಷಣೆಯೂ ಇಲ್ಲವಾಗುತ್ತದೆ. ಮುಂದೆ ಜನಿಸುವ ಮಕ್ಕಳು ಸಹ ಪಿತ್ರಾರ್ಜಿತ/ಆನುವಂಶಿಕ ಹಕ್ಕುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಹಾಗಾಗಿ ಅಂತರ್‌ಧರ್ಮೀಯ ವಿವಾಹ ಕುರಿತಂತೆ ಸಂವಿಧಾನಬದ್ಧವಾಗಿ ನೀಡಲಾದ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ಲಿಂಗ ಸಮಾನತೆಯ ನ್ಯಾಯವನ್ನು ಪುರಸ್ಕರಿಸಲು, ಮತಾಂತರ ಹೆಸರಿನಲ್ಲಿ ನಡೆಯುತ್ತಿರುವ ಅವಘಡಗಳನ್ನು ದೂರ ಮಾಡಲು, ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಪ್ರತ್ಯೇಕ ಕಾಯಿದೆಯನ್ನು ತರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿಯಲ್ಲಿ ಹೇಳಿದೆ.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಅಜಿತ್ ಕುಮಾರ , ರಾಧಾಕೃಷ್ಣ, ಕಿರಣ ಕುಮಾರ, ಸಂಪತ್, ಪಾಲಕ್ಷ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English