ವಿವಿ ಕಾಲೇಜಿನಲ್ಲಿ ʼರತ್ನಾಕರವರ್ಣಿಯ ಶತಕಗಳು- ಒಂದು ಅವಲೋಕನʼ- ರಾಜ್ಯಮಟ್ಟದ ವಿಚಾರ ಸಂಕಿರಣ ಸಂಪನ್ನ

7:05 PM, Wednesday, March 17th, 2021
Share
1 Star2 Stars3 Stars4 Stars5 Stars
(No Ratings Yet)
Loading...

UCMಮಂಗಳೂರು: ರತ್ನಾಕರವರ್ಣಿ ಕೇವಲ ಜೈನ ಕವಿಯಲ್ಲ, ಆತ ವಿಶ್ವಕವಿ, ಸರ್ವಮಾನ್ಯ. ಆತನ ಸಾಹಿತ್ಯದ ಅವಲೋಕನದ ಜೊತೆಗೆ ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸವಾಗಬೇಕಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಎಸ್‌ ಯಡಪಡಿತ್ತಾಯ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗಗಳು ಜಂಟಿಯಾಗಿ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ʼರತ್ನಾಕರವರ್ಣಿಯ ಶತಕಗಳು- ಒಂದು ಅವಲೋಕನʼ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. “ರತ್ನಾಕರವರ್ಣಿ ಸಂಪ್ರದಾಯಗಳಿಗೆ ಶರಣಾಗದ ವಿಮರ್ಶಾತ್ಮಕ ಮನೋಭಾವದವನು. ಮಡಿವಂತಿಕೆಯಿಲ್ಲದಿದ್ದರೂ ಎಲ್ಲದರಲ್ಲೂ ಇತಿಮಿತಿಯಿರಲಿ ಎಂದವನು. ಆತನ ʼಭರತೇಶ ವೈಭವʼ ಹಲವು ಭಾಷೆಗಳಿಗೆ ಭಾಷಾಂತರವಾಗಿರುವುದು ನಮ್ಮ ಹೆಮ್ಮೆ,” ಎಂದರು.

ಆಶಯ ನುಡಿಗಳನ್ನಾಡಿದ ಮೂಡಬಿದ್ರೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಅಜಿತ್‌ ಪ್ರಸಾದ್‌, ರತ್ನಾಕರವರ್ಣಿಯ ʼಭರತೇಶ ವೈಭವʼ ಮತ್ತು ಶತಕಗಳನ್ನು ಓದದೆ ಆತನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆತ ಬದುಕನ್ನು ಅದ್ಭುತವಾಗಿ ಅನುಭವಿಸಿದರೂ ಯೋಗಿಯಾಗಿದ್ದ, ಮೋಕ್ಷಕ್ಕೆ ಹಂಬಲಿಸಿದ್ದ, ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ, ಅಧ್ಯಯನ ಪೀಠವು ಹೊರರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿಯೂ ರತ್ನಾಕರವರ್ಣಿಯ ಶಾಂತಿ ಸಂದೇಶ ಹರಡುವ ಕೆಲಸ ಮಾಡುತ್ತಿದೆ, ಎಂದರು.

ಮೈಸೂರಿನ ಆಚಾರ್ಯ ವಿಷನ್‌ ಗುರುಕುಲ ಎಡು ಸರ್ವಿಸ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಡಾ. ಎಚ್‌.ಪಿ ಮೋಹನ ಕುಮಾರ, ರತ್ನಾಕರವರ್ಣಿಯ ತ್ರಿಲೋಕ ಶತಕ ಜೈನಾಗಮನದ, ಮೂರು ಲೋಕಗಳ ಕಲ್ಪನೆಯನ್ನು ಒದಗಿಸುತ್ತದೆ, ಎಂದರು. ಉಜಿರೆಯ ಎಸ್‌.ಡಿ.ಎಂ ಕಾಲೇಜಿನ ಕುಲಸಚಿವ ಡಾ. ಬಿ ಪಿ ಸಂಪತ್‌ ಕುಮಾರ್‌, ರತ್ನಾಕರವರ್ಣಿ ಎಲ್ಲೂ ಪರಮತ ಖಂಡನೆ ಮಾಡಿಲ್ಲ. ʼರತ್ನಾಕರಾಧೀಶ್ವರ ಶತಕʼ ದಲ್ಲಿ ಮಾನವ ಜನ್ಮದ ಸಾರವನ್ನು ಅತ್ಯಂತ ಸರಳವಾಗಿ ತಿಳಿಸಲಾಗಿದೆ, ಎಂದರು.

ಅಪರಾಜಿತೇಶ್ವರ ಶತಕದ ಕುರಿತು ವಿಚಾರ ಮಂಡಿಸಿದ ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ರತ್ನಾಕರವರ್ಣಿಯ ಶತಕಗಳಲ್ಲಿ ಕಾಣದ ಛಾಯೆಯಿದೆ. ಅರಿಯುವುದು ಕಠಿಣವಾದರೂ ಶತಕಗಳನ್ನು ಅರ್ಥಮಾಡಿಕೊಂಡವರಿಗೆ ಲಾಭವಿದೆ, ಎಂದರು. ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ ಎ ಹರೀಶ, ರತ್ನಾಕರವರ್ಣಿ ಶಾಂತಿ ಪಸರಿಸಿದ ಕವಿ ಎಂದರು.

ನಿರೀಕ್ಷಾ ಜೈನ್‌ ಹೊಸ್ಮಾರ್‌ ಮತ್ತು ಅತ್ತೂರು ಸುರೇಶ್‌ ರಾವ್‌ ಅವರ ರತ್ನಾಕರನ ಹಾಡುಗಳ ಹಾಡುಗಾರಿಕೆ ಗಮನ ಸೆಳೆಯಿತು. ಸಮಾನಂತರ ಗೋಷ್ಠಿಯಲ್ಲಿ ಪ್ರಬಂಧ ಮಂಡನೆಯಿತ್ತು. ವಿವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ.ಕೆ ಅತಿಥಿಗಳನ್ನು ಸ್ವಾಗತಿಸಿದರು. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ್ಚಂದ್ರ ಶಿಶಿಲ ಕವಿಯ ಬಗ್ಗೆ ನಾವೆಲ್ಲರೂ ಇನ್ನಷ್ಟು ತಿಳಿಯುವುದಿದೆ ಎಂದರು. ಕಾರ್ಯಕ್ರಮ, ವಿದ್ಯಾರ್ಥಿಗಳ ಪಾಲ್ಗೊಳ್ಳವಿಕೆಯನ್ನು ಕೊಂಡಾಡಿದರು.

ಡಾ. ಶೈಲಾ ಯು, ವಿ. ವೆಂಕಟೇಶ್‌, ನಾಗೇಶ್‌ ನಾಯಕ್‌, ಉಷಾ, ಡಾ. ಅಶ್ವಿನಿ ನಾಯಕ್‌ ಮೊದಲಾದವರ ನಿರ್ವಹಣೆ ಕಾರ್ಯಕ್ರಮವನ್ನು ಚೆಂದಗಾಣಿಸಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English