ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ರಚಿತ “ನಗ್ನ ಸತ್ಯ ಹಾಗೂ ಲ್ಯಾಂಡ್, ಜಸ್ಟ್ ಅಂಡ್ ಆಡಿಯೋ ಟೇಪ್ ” ಪುಸ್ತಕಗಳ ಲೋಕಾರ್ಪಣೆ

7:48 PM, Saturday, October 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Ramakrishna Upadyaಬೆಂಗಳೂರು : ರಾಜ್ಯ ಹಾಗೂ ದೇಶದ ಆಡಳಿತದಲ್ಲಿ ಭ್ರಷ್ಟತೆ ಮತ್ತು ಚುನಾವಣೆಗಳಲ್ಲಿನ ಜಾತಿ ಹಾಗೂ ಹಣಬಲ ಹಾಸುಹೊಕ್ಕಾಗಿವೆ. ಈ ಪರಿಸ್ಥಿತಿ ಎದುರಾಗಲು ನಾವೇ ಕಾರಣಕರ್ತರು. ಈ ವ್ಯವಸ್ಥೆಯ ಬದಲಾಯಿಸಲು ಸಮಾಜಕ್ಕೆ ಈ ವ್ಯವಸ್ಥೆಯನ್ನು ಎದುರಿಸುವ ಶಕ್ತಿ ಬರಬೇಕಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದ ಸ್ಕೌಟ್ಸ್‌ ಹಾಗೂ ಗೈಡ್ಸ್‌ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ರಾಮಕೃಷ್ಣ ಉಪಾಧ್ಯರಿಂದ ರಚಿತವಾಗಿ ಅನು ಪ್ರಕಾಶ ಹೊರತಂದಿರುವ “ನಗ್ನ ಸತ್ಯ ಹಾಗೂ Land, Lust & Audiotapes“ ಪುಸ್ತಕಗಳ ಲೋಕಾರ್ಪಣೆ ಮಾಡಿ ಮಾತನಾಡಿದರು. ಯವ ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ ರವಿಕುಮಾರ್‌ ಅವರು ಆತ್ಮಹತ್ಯೆ ಮಾಡಿಕೊಂಡಂತಹ ಸಂಧರ್ಭದಲ್ಲಿ ವಿಧಾನಸಭೆಯ ಅಧಿವೇಶನ ನಡೆಯುತ್ತಿತ್ತು. ಈ ಪ್ರಕರಣದ ಮೂಲಕ ನನ್ನ ನೇತೃತ್ವದ ಸರಕಾರಕ್ಕೆ ಕಳಂಕ ತರುವ ಪ್ರಯತ್ನವನ್ನ ವಿರೋಧ ಪಕ್ಷಗಳು ಮಾಡಿದವು. ಆದರೆ, ಈ ಪ್ರಕರಣಕ್ಕೂ ಹಾಗೂ ನಮ್ಮ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲದೇ ಇದ್ದ ಕಾರಣ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವ ಉದ್ದೇಶದಿಂದ ಸಿಬಿಐ ತನಿಖೆಗೆ ವಹಿಸಲಾಯಿತು.

ಒಂದು ವಾರದೊಳಗೆ ನಡೆದಂತಹ ಘಟನೆಗಳು ಆಗಿನ ಗೃಹ ಸಚಿವರಾಗಿದ್ದ ಕೆ.ಜೆ ಜಾರ್ಜ್‌ ಅವರ ಮೇಲೆ ಕಳಂಕ ತರಲು ಪ್ರಯತ್ನ ನಡೆಯಿತು. ಮೂಲತಃ ಮಹತ್ವಾಕಾಂಕ್ಷಿ ಆಗಿದ್ದ ಡಿ.ಕೆ ರವಿ, ತಾವು ಅಧಿಕಾರಿಯಾಗಿದ್ದ ಸಂಧರ್ಬಧಲ್ಲೇ ಹೊಸದೊಂದು ವ್ಯಾಪಾರಕ್ಕೆ ಮುಂದಾಗಿದ್ದರು. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ಸಿಓಡಿ ಒಳ್ಳೆಯ ರೀತಿಯಲ್ಲಿ ನಡೆಸಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಸಿಬಿಐ ತನ್ನ ವರದಿಯಲ್ಲಿ ವಿಸ್ತ್ರುತವಾಗಿ ತಿಳಿಸಿದೆ. ನಾವು ನಮ್ಮ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇರುವ ದೃಷ್ಟಿಯಿಂದ ತನಿಖೆಗೆ ಆದೇಶ ನೀಡಿದ್ದೇವು. ಅಪ್ರಾಮಾಣಿಕ ರಾಜಕಾರಣ ಮಾಡುವಲ್ಲಿ ನಿಸ್ಸೀಮರಾಗಿರುವ ಬಿಜೆಪಿ ಯವರು ತಾವೇ ಆರೋಪಿಸುತ್ತಿದ್ದ ಸಂಸ್ಥೆಗೆ ಈ ಪ್ರಕರಣವನ್ನು ವಹಿಸುವಂತೆ ಆಗ್ರಹಿಸಿದ್ದರು. ನನ್ನ ಅಧಿಕಾರಾವಧಿಯಲ್ಲಿ ಸುಮಾರು 5 ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೇವೆ, ಆದರೆ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಒಂದೇ ಒಂದು ಪ್ರಕರಣವನ್ನೂ ನೀಡುವ ಧೈರ್ಯ ಮಾಡಿಲ್ಲ ಎಂದು ಕುಟುಕಿದರು.

ಯುವ ಅಧಿಕಾರಿಯಾಗಿ, ಸ್ವಲ್ಪ ಮಟ್ಟಿನ ಪ್ರಚಾರ ಪ್ರಿಯರಾಗಿದ್ದ ಅವರು ಸ್ವಲ್ಪ ಸಮಯದಲ್ಲೇ ಜನಪ್ರಿಯತೆಯನ್ನು ಬೆಳೆಸಿಕೊಂಡರು. ಆದರೆ ತಮ್ಮ ದುಡುಕಿನ ಹಲವಾರು ನಿರ್ಧಾರಗಳಿಂದ ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾದರು ಎನ್ನುವುದು ಎಲ್ಲಾ ತನಿಖೆಗಳಲ್ಲೂ ಸಾಬೀತಾಗಿದೆ. ಈ ವರದಿಗಳ ಬಗ್ಗೆ ಹಾಗೂ ಆದ ಘಟನೆಗಳ ಬಗ್ಗೆ ಜನರಿಗೆ ಅರಿವು ಇದ್ದಿದ್ದರಿಂದ ತಾವು ಸಿಬಿಐ ವರದಿಯನ್ನು ಸದನದ ಮುಂದೆ ಇಡಲಿಲ್ಲ ಎಂದು ಹೇಳಿದರು.

ನಾವು ನಮ್ಮ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಪಾರದರ್ಶಕ ಹಾಗೂ ಪ್ರಾಮಾಣಿಕತೆಯ ಕಾರ್ಯವನ್ನು ಮಾಡಿದ್ದೇವೆ. ಈಗ ಪರಿಸ್ಥಿತಿಯೇ ಬದಲಾಗಿದೆ. ಎಲ್ಲ ಕಡೆ ಭ್ರಷ್ಟತೆ, ಜಾತಿಯ ಮೇಲಿನ ವ್ಯಾಮೋಹ ಹಾಗೂ ಚುನಾವಣೆಯಲ್ಲಿ ಹಣಬಲ ಹಾಸುಹೋಕ್ಕಾಗಿದೆ. ಇದಕ್ಕೆ ನಾವೆಲ್ಲರೂ ಕಾರಣಕರ್ತರು. ಆಡಳಿತದಲ್ಲಿ ಪ್ರಮಾಣಿಕ ಅಧಿಕಾರಿಗಳೂ ಇದ್ದಾರೆ ಹಾಗೆಯೇ ಭ್ರಷ್ಟ ಅಧಿಕಾರಿಗಳೂ ಇದ್ದಾರೆ. ಅದೇ ರೀತಿ ಜನಪ್ರತಿನಿಧಿಗಳೂ ಕೂಡಾ. ಈ ವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿ ಸಮಾಜಕ್ಕೆ ಬರಬೇಕು. ಆಗ ಮಾತ್ರ ನಾವು ಈ ಭ್ರಷ್ಟ ವ್ಯವಸ್ಥೆಯನ್ನು ಹೊಡೆದೋಡಿಸಲು ಸಾಧ್ಯ ಎಂದರು.

ಮಾಜಿ ಕಾನೂನು ಸಚಿವ ಎಂ.ಸಿ ನಾಣಯ್ಯ ಮಾತನಾಡಿ, ಅಧಿಕಾರಿಗಳು ನೇರವಾಗಿ ಜನರಿಗೆ ಉತ್ತರ ನೀಡುವುದಿಲ್ಲ. ಅಲ್ಲದೆ, ಶಾಸನ ಸಭೆಗಳಲ್ಲೂ ಉತ್ತರದಾಯಿತ್ವ ಇಲ್ಲ. ಈ ಹಿನ್ನಲೆಯಲ್ಲಿ ಹಲವಾರು ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಮೂಲಕ ತಮ್ಮದೇ ಆದ ಭ್ರಷ್ಟ ವ್ಯವಸ್ಥೆಯನ್ನು ರಚಿಸಿಕೊಂಡಿದ್ದಾರೆ. ಹಾಗಂತ ಪ್ರಾಮಾಣಿಕ ಅಧಿಕಾರಿಗಳು ಇಲ್ಲದೇ ಇಲ್ಲ. ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಹಾಗೂ ಅಧಿಕಾರದ ಮೇಲೆ ಹಿಡಿತ ಸಾಧಿಸಬೇಕು. ಈ ಮೂಲಕ ಜನಪರ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿ.ಜಿ.ಆರ್‌ ಸಿಂಧ್ಯಾ, ಪರಿಸರವಾದಿ ಸುರೇಶ್‌ ಹೆಬ್ಳೀಕರ್‌ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English