ಒಳಾಂಗಣ ಕ್ರೀಡಾಂಗಣ, ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣಕ್ಕೆ ಶಿಲನ್ಯಾಸ

9:32 PM, Tuesday, November 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Smart cityಮಂಗಳೂರು :  ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯಡಿ ಮಂಗಳೂರು ನಗರದಲ್ಲಿ ಅಭಿವೃದ್ಧಿ ಪರ್ವವೇ ಆರಂಭಗೊಂಡಿದ್ದು, ಮುಂಬರುವ ವರ್ಷದಲ್ಲಿ ಪಂಪ್‍ವೆಲ್‍ನಲ್ಲಿ ಬಹುದೊಡ್ಡ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ತಿಳಿಸಿದರು.

ಅವರು ನ.2ರ ಮಂಗಳವಾರ ಮಂಗಳೂರು ನಗರದ ಉರ್ವ ಮಾರುಕಟ್ಟೆ ಬಳಿ 20.54 ಕೋಟಿ ರೂ.ಗಳಡಿ ಉದ್ದೇಶಿತ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್‍ಗಳನ್ನೊಳಗೊಂಡ ಒಳಾಂಗಣ ಕ್ರೀಡಾಂಗಣ ಹಾಗೂ 70 ಕೋಟಿ ರೂ.ಗಳ ವೆಚ್ಚದಲ್ಲಿ ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಬಳಿ ಪಿಪಿಪಿ ಮಾದರಿಯಡಿ ಉದ್ದೇಶಿತ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣ ಕಾಮಗಾರಿಗಳಿಗೆ ರಂಗರಾವ್ ಪುರಭವನದಲ್ಲಿ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.

ಮುಂದಿನ ವರ್ಷ ಮಂಗಳೂರಿನ ಪಂಪ್‍ವೆಲ್‍ನಲ್ಲಿ ಅತಿ ದೊಡ್ಡ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಕೈಗೊಳ್ಳಲಾಗುವುದು, ಆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದ್ದು, ಅಂಕಿತವಾಗಿದೆ, ಮಾರುಕಟ್ಟೆ ಸ್ಥಳಾಂತರ ಕುರಿತಂತೆ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಸಮಸ್ಯೆ ಇರ್ತಥ್ಯವಾದ ನಂತರ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

ಮಂಗಳೂರು ಸ್ಮಾಟ್ ಸಿಟಿ ಕಾಮಗಾರಿಗಳನ್ನು ಎರಡನೇ ಹಂತದಲ್ಲಿ ಕೈಗೊಳ್ಳಲಾಯಿತು. ಆದರೂ ಕಾಮಗಾರಿಗಳಲ್ಲಿ ಮಂಗಳೂರು ನಂಬರ್ ಒನ್ ಆಗಿ ಹೊರಹೊಮ್ಮಿದೆ, ಅದಕ್ಕೆ ಪ್ರಮುಖ ಕಾರಣ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಶಾಸಕರ ಉತ್ಸಾಹ ಹಾಗೂ ಪ್ರೋತ್ಸಾಹ. ಮಂಗಳೂರು ಮೇಯರ್ ಕೂಡ ಸ್ಮಾಟ್ ಸಿಟಿಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ,  ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ  ಕೇಂದ್ರದಿಂದ ಐದು ನೂರು ಕೋಟಿ ರೂ.ಗಳ ಅನುದಾನ  ಬಿಡುಗಡೆಯಾಗಿದೆ ಎಂದು ಹೇಳಿದರು.
Smart city
ಮಂಗಳೂರನ್ನು ಅಭಿವೃದ್ಧಿಶೀಲ ಹಾಗೂ ಮಾದರಿ ನಗರವನ್ನಾಗಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಅವುಗಳಲ್ಲಿ ಉತ್ತಮ ದರ್ಜೆಯ ಕಾಂಕ್ರಿಟ್ ರಸ್ತೆಗಳ ನಿರ್ಮಾಣ, ಕಾರ್ಕ್ ಟವರ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಸಾರ್ವಜನಿಕರ ಸೇವೆಗೆ ಅರ್ಪಣೆಯಾಗಿವೆ, ಇನ್ನು ಹಲವಾರು ಪ್ರಗತಿಯಲ್ಲಿವೆ, ಮಂಗಳೂರನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಸಾರ್ವಜನಿಕರ ಸಹಕಾರ ಅತಿ ಅಗತ್ಯ ಅವರು ಕೈಜೋಡಿಸುವಂತೆ ಕರೆ ನೀಡಿದರು.

ಸ್ಮಾಟ್ ಸಿಟಿಯ ಕಾಮಗಾರಿಗಳನ್ನು ಕೈಗೊಳ್ಳಲು ಯಡಿಯೂರಪ್ಪ ನೇತೃತ್ವದ ಸರಕಾರದ ಮೊದಲ ಹಂತದಲ್ಲಿ ಮೂರು ನೂರು ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿತ್ತು,   ಅದರಲ್ಲಿ ಗುಣಮಟ್ಟದ ಕಾಂಕ್ರಿಟ್ ರಸ್ತೆಗಳು ಸೇರಿದಂತೆ, ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು, ಹಿಂದಿಗಿಂತಲೂ ಇದೀಗ ಮಂಗಳೂರಿನಲ್ಲಿ ಸುಂದರ ರಸ್ತೆಗಳು ನಿರ್ಮಾಣವಾಗಿವೆ, ಸ್ಮಾರ್ಟ್ ಸಿಟಿಯೊಂದಿಗೆ ಅಮೃತ್ ಯೋಜನೆಯಡಿ 180 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ, ಆ ಯೋಜನೆಯಡಿ ಮೂಲಭೂತ ಸೌಕರ್ಯ ಹಾಗೂ ಯುಜಿಡಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೈಗೊಳ್ಳುವ ವೇಳೆ ರಸ್ತೆ ಅಗಲೀಕರಣ ಸೇರಿದಂತೆ ಸ್ಥಳ ತೆರವುಗೊಳಿಸುವುದು ಸೇರಿದಂತೆ ಕೆಲವು ಸಮಸ್ಯೆಗಳು ಎದುರಾಗಿದ್ದವು, ಶಾಸಕರು ಶ್ರಮವಹಿಸಿ ಅದನ್ನು ಬಗೆಹರಿಸಿದ್ದಾರೆ, ನಗರದಲ್ಲಿ  ಕಬ್ಬಡಿ ಹಾಗೂ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ, ಕ್ರೀಡಾಂಗಣ ನಿರ್ಮಾಣವಾದಲ್ಲಿ  ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.

ಸುಂದರ ಹಾಗೂ ಪಾರಂಪರಿಕ ನಗರಗಳನ್ನು ನಿರ್ಮಿಸುವ ಪರಿಕಲ್ಪನೆಯಡಿ ನಗರಾಭಿವೃದ್ಧಿ ಇಲಾಖೆ ವತಿಯಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ನಗರಗಳನ್ನು ಅಮೇರಿಕಾದಲ್ಲಿನ ನಗರಗಳಂತೆ ಅಭಿವೃದ್ದಿ ಪಡಿಸಬೇಕೆನ್ನುವ ಚಿಂತನೆಯಡಿ ದೇಶದ 100 ನಗರಗಳನ್ನು ಸ್ಮಾಟ್ ಸಿಟಿಯನ್ನಾಗಿ ನಿರ್ಮಿಸಲು ಯೋಜನೆ ರೂಪಿಸಲಾಯಿತು. ಅದರ ಸಮರ್ಪಕ ಅನುಷ್ಠಾನಕ್ಕೆ ಜನರ ಸಹಭಾಗಿತ್ವ ಅತ್ಯಂತ ಅಗತ್ಯ, ಸರಕಾರವು ಕೂಡ ಕಾಲ ಕಾಲಕ್ಕೆ ಅನುದಾನ ನೀಡುತ್ತಿದೆ, 20 ವರ್ಷಗಳಲ್ಲಿ ಸ್ಮಾರ್ಟ್ ಸಿಟಿಯನ್ನು ಅಭಿವೃದ್ಧಿಪಡಿಸಲಾಗುವುದು, ವಿವಿಧ ಕಾಮಗಾರಿಗಳಿಗಾಗಿ ಪ್ರಧಾನಿಯವರು 500 ಕೋಟಿ ರೂ.ಗಳ ಅನುದಾನ ನೀಡಿರುವುದ ಸ್ವಾಗತಾರ್ಹ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕರಾದ ವೇದವ್ಯಾಸ್ ಕಾಮತ್ ಮಾತನಾಡಿ, ರಾಜ್ಯದಲ್ಲಿ ಅಮೃತ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯನ್ನು ಮಂಗಳೂರು ಪಡೆದುಕೊಂಡಿದೆ ಹಾಗೂ 24 ಗಂಟೆಗಳ ಕಾಲ ಜನರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಸರಕಾರದಿಂದ ಈಗಾಗಲೇ 789 ಕೋಟಿ ರೂ.ಗಳ ಅನುದಾನ ದೊರಕಿದೆ. ಗ್ಯಾಸ್ ಪೈಪ್‍ಲೈನ್ ಮುಖಾಂತರ ಮನೆ ಮನೆಗೆ ಗ್ಯಾಸ್ ತಲುಪಿಸುವ ಕೆಲಸವನ್ನು ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಮಾಡಲಾಗುತ್ತಿದೆ ಎಂದರು.

ಇಡೀ ರಾಜ್ಯದ ಬೇರೆ ಜಿಲ್ಲೆಗಳಿಗಿಂತ ಮಂಗಳೂರಿಗೆ ವಿವಿಧ ರೀತಿಯ ಯೋಜನೆಗಳನ್ನು ನೀಡಲಾಗಿದ್ದು ಅದರ ಅನುಷ್ಠಾನವಾಗುತ್ತಿದೆ. ನಗರದಲ್ಲಿ 3,000 ಕೋಟಿಯ ಕಾಮಗಾರಿಗಳನ್ನು ಕೈಗೊಂಡಿದ್ದು, ಮುಂದಿನ 2024-25ರ ವೇಳೆಗೆ ಮಂಗಳೂರು ನಗರದ ಚಿತ್ರಣವೇ ಬದಲಾಗಿರುತ್ತದೆ ಹಾಗೂ ಅಭಿವೃದ್ಧಿ ಪಥದೆಡೆಗೆ ಸಾಗುತ್ತದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಾಗಿತ್ತು. ಅದರಂತೆಯೇ ಜನಪ್ರತಿನಿಧಿನಿಗಳು ಕೈಜೋಡಿಸಬೇಕು ಹಾಗೂ ಜನಸಾಮಾನ್ಯರು ಸಹಕರಿಸಬೇಕು. 11 ಮಾಳಿಗೆಯ ಸುಸಜ್ಜಿತ ಮಾರುಕಟ್ಟೆಯನ್ನು ಮಂಗಳೂರು ನಗರದಲ್ಲಿ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗುತ್ತಿದೆ, ನಗರದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಬಸ್, ಕಾರು ಮತ್ತು ಸ್ಕೂಟರ್‍ಗಳ ನಿಲ್ದಾಣ ವ್ಯವಸ್ಥಿತವಾಗಿ ಆಗಬೇಕು. ಜನಪ್ರತಿನಿಧಿಗಳು ಯಶಸ್ವಿಯಾಗಿ ಸಮಾಜದ ಅಭಿವೃದ್ಧಿಗೆ ಕಟಿಬದ್ಧರಾಗಿ ಕೆಲಸ ನಡೆಸಬೇಕು ಎಂದರು.

ಪ್ರತಿ ವರ್ಷ ಮಳೆಗಾಲದಲ್ಲಿ ಮಂಗಳೂರಿನ ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ನುಗ್ಗುವ ಕಾರಣ ಜನರಿಗೆ ತೊಂದರೆಯುಂಟಾಗುತ್ತಿದೆ. ರಾಜಕಾಲುವೆ ಹತ್ತಿರವಿರುವ ವಾರ್ಡ್‍ಗಳು ಮುಳುಗಡೆಯಾಗುತ್ತದೆ. ಹಾನಿ ಪ್ರದೇಶವನ್ನು ಸರಿಪಡಿಸುವ ಉದ್ದೇಶದಿಂದ ಸುಮಾರು ಒಟ್ಟು 65 ಕೋಟಿ ವೆಚ್ಚದಲ್ಲಿ ತಡೆಗೋಡೆಯನ್ನು ನಿರ್ಮಿಸಿ, ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದು ಹೇಳಿದರು.

ಮಂಗಳೂರು ಪ್ರವಾಸೋಧ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ, ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು, ಹಂಪನಕಟ್ಟೆ ಬಳಿಯ 500ಕ್ಕೂ ಹೆಚ್ಚಿನ ಕಾರ್ ಪಾರ್ಕಿಂಗ್ ನಿರ್ಮಾಣ ಹಾಗೂ ಉರ್ವ ಮಾರುಕಟ್ಟೆ ಬಳಿಯ ಕಬ್ಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್‍ಗಳ ಒಳಾಂಗಣ ಕ್ರೀಡಾಂಗಣದ ಕಾಮಗಾರಿಗಳು ಶೀಘ್ರವೇ ನಿರ್ಮಾಣಗೊಂಡು, ಹೆಚ್ಚಿನ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದರು.

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಕಿಯೋನಿಕ್ಸ್‍ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಸ್ಮಾಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ಹಾಗೂ ಇತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English