ಬಸ್ ನಲ್ಲಿ ಕೋಳಿ ಮಾಂಸ ಹಿಡಿದುಕೊಂಡ ಪ್ರಯಾಣಿಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಚಾಲಕ

2:44 PM, Monday, October 16th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಬಂಟ್ವಾಳ : ಕೋಳಿ ಮಾಂಸ ಹಿಡಿದುಕೊಂಡು ಪ್ರಯಾಣಿಕನೋರ್ವ ಬಸ್ ಹತ್ತಿದ ಕಾರಣಕ್ಕಾಗಿ ನಿರ್ವಾಹಕ ಅವಾಚ್ಯ ಶಬ್ದದಿಂದ ಬೈದುದಲ್ಲದೆ, ಚಾಲಕ ಪ್ರಯಾಣಿಕರನ್ನು ಕೂರಿಸಿಕೊಂಡ ಬಸ್ಸನ್ನು ನೇರವಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತಂದ ಘಟನೆ ನಡೆದಿದೆ.

ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ – ಪುತ್ತೂರು ನಡುವೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಸುರೇಶ್ ಎಂಬವರು ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ಈತನ ಕೈಯಲ್ಲಿ ಚೀಲವೊಂದ್ದಿದ್ದು, ಇದರ ಬಗ್ಗೆ ವಿಚಾರಿಸಿದ್ದಾರೆ. ಪ್ರಯಾಣಿಕ ಕೋಳಿ ಮಾಂಸ ಎಂದು ತಿಳಿಸಿದಾಗ ಬಸ್ ನಿಂದ ಇಳಿಯುವಂತೆ ಒತ್ತಾಯಿಸಿ, ಕೋಳಿ ಮಾಂಸ ಬಸ್ ನಲ್ಲಿ ತರಲು ಅವಕಾಶವಿಲ್ಲ ಎಂಬ ವಾದ ನಿರ್ವಾಹಕನದ್ದು, ಆದರೆ ಸುರೇಶ್ ಬಸ್ ನಿಂದ ಇಳಿಯಲು ಒಪ್ಪಲಿಲ್ಲ. ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ.

ಸುರೇಶ್ ಬಸ್ ನಿಂದ ಇಳಿಯದ ಕಾರಣಕ್ಕಾಗಿ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ಸನ್ನು ಬಂಟ್ವಾಳ ಪೊಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಇಳಿಸಿದ್ದಾನೆ. ಈ ವೇಳೆ ಠಾಣಾ ಉಪ ನಿರೀಕ್ಷಕ ಎಸ್.ಐ.ರಾಮಕೃಷ್ಣ ಅವರು ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಬುದ್ದಿ ಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಬಸ್ ನಲ್ಲಿ ಕೋಳಿ ಮಾಂಸ, ಮೀನು ತರುವಂತಿಲ್ಲ, ಜೀವ ಇರುವ ವಸ್ತುವನ್ನು ತರಬಹುದು, ಮಾಂಸ ಇತರರಿಗೆ ವಾಸನೆ ಬರುತ್ತದೆ. ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ನಿಟ್ಟಿನಲ್ಲಿ ನಿಗಮ ಅದೇಶ ಮಾಡಿದೆ ಎಂದು ಕೆಎಸ್ಸಾರ್ಟಿಸಿ ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಮಾಹಿತಿ ನೀಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English