ಮಂಗಳೂರು : ಭಾರತೀಯ ಕಿಸಾನ್ ಸಂಘ ಮತ್ತು ದ.ಕ ಜಿಲ್ಲಾ ಸಾವಯವ ಕೃಷಿ ಪರಿವಾರ ಇವರ ಜಂಟಿ ಆಶ್ರಯದಲ್ಲಿ ದಿನಾಂಕ ಇಂದು ಬೆಳಿಗ್ಗೆ 11-00 ರಿಂದ ಜಿಲ್ಲಾಧಿಕಾರಿ ಕಛೇರಿ ಎದುರುಗಡೆ ಎಂಡೋಸಲ್ಫಾನ್ ನಿಷೇಧ ಕೂಡಲೇ ಜಾರಿಗೆ ಆಗ್ರಹಿಸಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾವಯವ ಕೃಷಿಕ ಸುಂದರ್ ರಾವ್ ಅವರು ಎಂಡೋಸಲ್ಫಾನ್ ಎಂಬ ಮಹಾಮಾರಿ ಕೀಟ ನಾಶಕವು ಸಂಪೂರ್ಣ ಜೀವ ಜಗತ್ತಿಗೇ ಮಾರಕವಾಗಿರುವುದು ಇಂದು ಗುಟ್ಟಾಗಿ ಉಳಿದಿಲ್ಲ. ಜಗತ್ತಿನ 84 ದೇಶಗಳು ಈ ಮಾರಕ ಕೀಟ ನಾಶಕ ವನ್ನು ಈಗಾಗಲೇ ನಿಷೇಧಿಸಿವೆ. ಇದರ ದುಷ್ಪರಿಣಾಮ ಭೀಕರ. ಹುಟ್ಟುವ ಮಕ್ಕಳು ಬುದ್ಧಿಮಾಂದ್ಯರಾಗಿ, ಅಂಗಹೀನರಾಗಿ, ಅಷ್ಟವಕ್ರರಾಗಿರುವುದು ಇತ್ಯಾದಿ. ಅಣುವಿಕಿರಣದ ಭಯಾನಕತೆಗಿಂತ ಇದು ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಈ ಬಗ್ಗೆ ಈಗಾಗಲೇ ಅದೆಷ್ಟೋ ಅಧ್ಯಯನ, ಫಲಿತಾಂಶ, ಸಮೀಕ್ಷಾ ವರದಿಗಳು ಬಂದಿವೆ. ಅದಲ್ಲದೆ ಪ್ರತ್ಯಕ್ಷ ಪರಿಣಾಮ ಕಣ್ಣಿಗೆ ರಾಚುವಂತೆ ಪಡ್ರೆ, ಕೊಕ್ಕಡ, ಎಣ್ಮಕಜೆ ಇತ್ಯಾದಿಕಡೆ ದೊಡ್ಡ ಪ್ರಮಾಣದಲ್ಲಿದೆ. ಬೇರೆ ಬೇರೆ ಹೆಸರುಗಳಲ್ಲಿ ಅದು ನಮ್ಮ ನಿಮ್ಮೆಲ್ಲರ ಮನೆ ಪ್ರವೇಶಿಸಿದೆ. ಅದರಿಂದಾದ ದುಷ್ಪರಿಣಾಮ ತಿಳಿದವರ್ಯಾರೂ ಅದರ ಪರ ವಹಿಸಲು ಸಾಧ್ಯವಿಲ್ಲ. ಇದೇ ಎಪ್ರಿಲ್ 29ರಂದು ಕೇರಳ ರಾಜ್ಯಾದ್ಯಂತ “ಎಂಡೋಸಲ್ಫಾನ್ ವಿರೋಧಿ ಹರತಾಳ”ನಡೆದಿದೆ, ಎಂದರು.
ಭಾರತೀಯ ಕಿಸಾನ್ ಸಂಘದ ಪುಟ್ಟಸ್ವಾಮಿ ಅವರು ಮಾತನಾಡಿ ಪ್ರತಿ ವರ್ಷ 150 ಲಕ್ಷ ಲೀಟರ್ ಎಂಡೋಸಲ್ಫಾನ್ ಉತ್ಪಾದಿಸುತ್ತಿರುವ ಬಾರತ ವಿಶ್ವದಲ್ಲಿ ದ್ವಿತೀಯ ಸ್ಥನ ಹೊಂದಿದೆ. 173 ದೇಶಗಳ ಭಾಗವಹಿಸುವಿಕೆಯು ಜಿನಿವಾದ ಅಂತರಾಷ್ಟ್ರೀಯ ಅಧಿವೇಶನದಲ್ಲಿ ಇದೇ ಎಪ್ರಿಲ್ 29ರಂದು ಎಂಡೋಸಲ್ಫಾನನ್ನು ವಿಶ್ವದಾದ್ಯಂತ ನಿಷೇಧಿಸುವ ನಿರ್ಣಯ ಕೈಗೊಳ್ಳಲಾಗಿದ್ದರೂ, ಅದರ ಅನುಷ್ಠಾನಕ್ಕೆ 11 ವರುಷಗಳ ದೀರ್ಘ ಕಾಲಾವಕಾಶವನ್ನು ಭಾರತ ಸರಕಾರ ಪಡೆದಿದೆ. ಈಗಾಗಲೇ ಭೂಮಿ ಅಂತರ್ಜಲವನ್ನು ಸೇರಿ ದುಷ್ಪರಿಣಾಮ ಬೀರುತ್ತಿರುವ ಇದು ಇನ್ನೂ 11 ವರ್ಷ ಭೂಮಿ-ನೀರನ್ನು ಮಲಿನಗೊಳಿಸಿದರೆ ರೈತ ಸಮುದಾಯ ಜೊತೆಗೆ ನೀರು-ಆಹಾರ ಸೇವಿಸಿದ ಸಂಪೂರ್ಣ ಜನ ಸಮುದಾಯ ವಿನಾಶದಂಚಿಗೆ ತಲುಪುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ವಿಷಮುಕ್ತ ಆಹಾರಕ್ಕಾಗಿ ಸಾವಯವ ಕೃಷಿಯ ದಾರಿಯನ್ನು ಹಿಡಿದಿರುವ ಭಾರತೀಯ ಕಿಸಾನ್ ಸಂಘ ಹಾಗೂ ದಕ್ಷಿಣ ಕನ್ನಡಜಿಲ್ಲಾ ಸಾವಯವ ಕೃಷಿ ಪರಿವಾರಗಳು ಜಂಟಿಯಾಗಿ ಈ ಪ್ರತಿಭಟನಾ ಸಭೆಯನ್ನು ಆಯೋಜಿಸಿತು. ನಾರಾಯಣ ಭಟ್, ಎ.ಪಿ ಸದಾಶಿವ ಮತ್ತು ಶರಾವತಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
Click this button or press Ctrl+G to toggle between Kannada and English