ಮಂಗಳೂರು : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯನ್ನು ಎದುರಿಸುವ ತರಬೇತಿ ಕೇಂದ್ರ ಮಂಗಳೂರಿನಲ್ಲಿಯೂ ಆರಂಭಗೊಳ್ಳಲಿದೆ. ನವದೆಹಲಿಯ ಚಾಣಕ್ಯ ಅಕಾಡೆಮಿ ಹಾಗೂ ಬಂಟರ ಯಾನೆ ನಾಡವರ ಸಂಘದ ಸಹಯೋಗದಲ್ಲಿ ಯುವಜನತೆಗೆ ಸುವರ್ಣವಕಾಶ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆಯ ಸ್ಥಾಪಕ ಎ.ಕೆ. ಮಿಶ್ರ ಅವರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ‘ಯಶಸ್ಸಿನ ಕಲೆ’ ಕುರಿತ ವಿಚಾರಸಂಕಿರಣ ನಗರದ ಪುರಭವನದಲ್ಲಿ ನಡೆಯಿತು.
ಅವಿಭಜಿತ ಜಿಲ್ಲೆಯ ಪದವೀಧರ ವಿದ್ಯಾರ್ಥಿಗಳಿಗೆ ಅ.8ರಂದು ಮಂಗಳೂರಿನಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ 180 ವಿದ್ಯಾರ್ಥಿಗಳು ಆಯ್ಕೆಯಗಲಿದ್ದು, ಅವರಲ್ಲಿ ಮೊದಲ ರ್ಯಾಂಕ್ ಪಡೆದ ಮೂವರಿಗೆ ಉಚಿತ ಶಿಕ್ಷಣ, ನಂತರದ ಹತ್ತು ಮಂದಿಗೆ ಶುಲ್ಕದಲ್ಲಿ ಶೇ.೫೦ರಷ್ಟು ಹಾಗೂ ಉಳಿದವರಿಗೆ ಶೇ.25ರಷ್ಟು ಕಡಿತ ನೀಡಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ವಿನಯಕುಮಾರ್ ಹೆಗ್ಡೆ ಮಾತನಾಡಿ, ಭವಿಷ್ಯದಲ್ಲಿ ಭಾರತ ಎತ್ತಸಾಗಬೇಕೆಂಬುದನ್ನು ನಿರ್ಧರಿಸುವವರು ನಾಗರಿಕ ಸೇವೆಯಲ್ಲಿರುವವರು. ಹಾಗಾಗಿ ಪ್ರತಿಭಾವಂತರು ಇಂತಹ ಉನ್ನತ ಹುದ್ದೆಯಲ್ಲಿರುವುದು ಉತ್ತಮ. ಕೇವಲ ವೈದ್ಯರು, ಇಂಜಿನಿಯರ್ಗಳು ಮಾತ್ರವೇ ದೇಶದ ಆಸ್ತಿಯಲ್ಲ. ಐಎಫ್ಎಸ್, ಐಎಎಸ್, ಐಪಿಎಸ್ ಅಧಿಕಾರಿಗಳು ದೇಶದ ಭವಿಷ್ಯವನ್ನು ರೂಪಿಸುತ್ತಾರೆ ಎಂದರು.
ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸೇವೆಗೆ ಒಂದು ಹಂತದಲ್ಲಿ ಕಡಿವಾಣ ಹಾಕಬಹುದು. ಆದರೆ, ಉತ್ಕೃಷ್ಣತೆಗೆ, ದೇಶಸೇವೆಗೆ ನಾಗರಿಕ ಸೇವೆಗಿಂತ ಅತ್ಯುತ್ತಮವಾದದು ಬೇರೊಂದಿಲ್ಲ ಎಂದ ಅವರು, ಪದವಿ ಮುಗಿದ ಮೇಲೆ ಶಿಕ್ಷಣದ ಹಾದಿ ಮುಗಿಯಿತು ಎಂದುಕೊಳ್ಳುವುದಕ್ಕಿಂತ ಶಿಕ್ಷಣಕ್ಕೆ ಕೊನೆಯಿಲ್ಲ ಎಂದುಕೊಂಡರೆ ಐಎಎಸ್ ಕಷ್ಟವಲ್ಲ ಎಂದರು.
ನಿವೃತ್ತ ಐಎಫ್ಎಸ್ ಆಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಸಿ. ಪಂಡ ನಾಗರಿಕ ಸೇವಾ ಪರೀಕ್ಷೆಗಳನ್ನು ಕೈಗೊಳ್ಳಲು ಇರಬೇಕಾದ ಕೌಶಲ್ಯಗಳ ಬಗ್ಗೆ ತಿಳಿಸಿದ್ದಾರೆ. ಚಾಣಕ್ಯ ಐಎಎಸ್ ಅಕಾಡೆಮಿಯ ಮುಖ್ಯ ಅಧಿಕಾರಿ ಯಶ್ನಿತ್ ಪುಷ್ಕರಣ್, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಪದಾಧಿಕಾರಿಗಳಾದ ಡಾ. ಆಶಾಜ್ಯೋತಿ ರೈ ಮಾಲಾಡಿ, ಕಾವು ಹೇಮನಾಥ ಶೆಟ್ಟಿ, ವಸಂತ ಶೆಟ್ಟಿ, ರವೀಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English