ಮಂಗಳೂರು: ಕಾಡಿನಲ್ಲಿ ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ, ವಾಹನ ಸಹಿತ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಧರ್ಮಸ್ಥಳದ ಪುದುವೆಟ್ಟು ಎಂಬಲ್ಲಿ ನಡೆದಿದೆ.
ಅಬ್ಬಾಸ್ ಎಂಬಾತ ಬಂಧಿತ ಆರೋಪಿ. ಇತರ ಮೂವರು ಪರಾರಿಯಾಗಿದ್ದಾರೆ. ಇವರು ಕಾಡಿನಲ್ಲಿ ಅಕ್ರಮವಾಗಿ ಬೀಟೆ, ಸಾಗುವಾನಿ ಮರಗಳನ್ನು ಕಡಿದು ವಾಹನದಲ್ಲಿ ಸಾಗಾಟ ಮಾಡುವ ಪ್ರಯತ್ನದಲ್ಲಿದ್ದಾಗ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ರಾತ್ರಿಯಿಡೀ ಕಾದು ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಅಕ್ರಮ ಮರ ಸಾಗಾಟದ ಯತ್ನವನ್ನು ಅರಣ್ಯ ಇಲಾಖೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಈ ಸಂದರ್ಭ ಮರಗಳ ಸಹಿತ ಒಂದು ಓಮ್ನಿ, ಮರ ಕಡಿಯಲು ಬಳಸಿದ್ದ ಗರಗಸ, ಕತ್ತಿ ಮುಂತಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Click this button or press Ctrl+G to toggle between Kannada and English